ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವರಾಜ ಹೊರಟ್ಟಿ ಆಸ್ತಿ ಕಬಳಿಸಿದ್ದಾರೆ’; ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

Last Updated 29 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ತುಮಕೂರು: 'ನಮ್ಮ ಮಠಕ್ಕೆ ಸೇರಿದ ಧಾರವಾಡದ ಸರ್ವೋದಯ ಶಿಕ್ಷಣ ಟ್ರಸ್ಟ್ ಆಸ್ತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಬಳಿಸಿದ್ದು, ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ’ ಎಂದು ವಾಲ್ಮೀಕಿ ಮಹಾಸಂಸ್ಥಾನಪೀಠದ (ರಾಜನಹಳ್ಳಿ) ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳುತ್ತೇನೆ ಎಂದು ಈಚೆಗೆ ಬೆಂಗಳೂರಿನಲ್ಲಿ ಹೊರಟ್ಟಿಯವರು ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದರು.

‘ಅದರೆ, ಅರ್ಜಿದಾರರಾಗಿ ಯಾವ ಕೋರ್ಟ್‌ನಲ್ಲೂ ಅವರು ಪ್ರಕರಣ ದಾಖಲಿಸಿಲ್ಲ. ಟ್ರಸ್ಟಿನ ಆಡಳಿತ ತಾವೇ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಟ್ರಸ್ಟ್ ಅವರದ್ದೇ ಎಂಬುದಕ್ಕೆ ಯಾವ ದಾಖಲೆ ಇಲ್ಲ. ಅವರೇ ಅಧ್ಯಕ್ಷರೆಂದು ಕೋರ್ಟ್ ಆದೇಶ ನೀಡಿದ್ದರೆ ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

‘ಈ ಪ್ರಕರಣ ಕುರಿತು ಸತ್ಯಾಸತ್ಯತೆ ತಿಳಿಯಲು ಮಾಧ್ಯಮಗಳೇ ಒಂದು ವೇದಿಕೆ ಸೃಷ್ಟಿಸಲಿ. ಅಲ್ಲಿ ಈ ಕುರಿತು ದಾಖಲಾತಿಗಳೊಂದಿಗೆ ಚರ್ಚಿಸಲು ನಾವು ಸಿದ್ಧರಿದ್ದು, ಹೊರಟ್ಟಿ ಅವರೂ ದಾಖಲೆಗಳಿದ್ದರೆ ತೆಗೆದುಕೊಂಡು ಬಂದು ಚರ್ಚೆ ಮಾಡಲಿ’ ಎಂದರು.

‘ಹೊರಟ್ಟಿ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ತಪ್ಪು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಅರೋಪಿಸಿದರು.

’ಜಾತ್ಯತೀತ ಜನತಾ ದಳಕ್ಕೂ ಮತ್ತು ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

’ಹೊರಟ್ಟಿ ಈ ರೀತಿ ಅಕ್ರಮ ಹಾಗೂ ಅವ್ಯವಹಾರ ಮಾಡಿರುವುದರಿಂದ ವಿಧಾನ ಪರಿಷತ್ ಅಧ್ಯಕ್ಷ ಸ್ಥಾನದಲ್ಲಿರಬಾರದು. ಆ ಸ್ಥಾನದ ಗೌರವ ಉಳಿಯಬೇಕಾದರೆ ಕೆಳಗಿಳಿಸಬೇಕು. ಇಲ್ಲದೇ ಇದ್ದರೆ ವಾಲ್ಮೀಕಿ ಸಮುದಾಯದೊಂದಿಗೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಟ್ರಸ್ಟ್‌ನ ‘ಪವರ್ ಆಫ್ ಅಟಾರ್ನಿ’ ಭರತ್ ಮಾತನಾಡಿ, ‘ನಮ್ಮ ಟ್ರಸ್ಟ್ ಬಾಂಬೆ ಪಬ್ಲಿಕ್ ಟ್ರಸ್ಟ್ ಕಾನೂನು ಪ್ರಕಾರ 1956ರಲ್ಲಿ ನೋಂದಾಯಿತ ಸಾರ್ವಜನಿಕ ಟ್ರಸ್ಟ್. ಟ್ರಸ್ಟ್ ಸುಮಾರು ₹ 40 ಕೋಟಿ ಮೌಲ್ಯದ ಆಸ್ತಿ ಹೊಂದಿದೆ' ಎಂದರು.

'ಟ್ರಸ್ಟ್ ತನ್ನದೇ ಬೈಲಾ ಹೊಂದಿದೆ. ಇದರ ಪ್ರಕಾರ ಟ್ರಸ್ಟ್‌ನ ಎಲ್ಲ ಅಧಿಕಾರವೂ ಸೋಲ್ ಟ್ರಸ್ಟಿಗೆ ಮಾತ್ರ ಇರುತ್ತದೆ. ಇನ್ಯಾರಿಗೂ ಅಧಿಕಾರವಿಲ್ಲ. ಹೊರಟ್ಟಿಯವರು ಟ್ರಸ್ಟ್ ಕಾರ್ಯಾಧ್ಯಕ್ಷರೆಂದು ಹೇಳಿಕೊಂಡು ಆಸ್ತಿ ಕಬಳಿಸಿದ್ದಾರೆ’ ಎಂದು ಆರೋಪಿಸಿದರು.

ವಾಲ್ಮೀಕಿ ಸಮಾಜದ ಮುಖಂಡರಾದ ತೂ.ಬಿ.ಮಲ್ಲೇಶ್, ಪ್ರತಾಪ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT