ಕುಣಿಗಲ್: ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಅಂದಾನಪ್ಪ (55) ಮೇಲೆ ಚಿರತೆ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಕ್ಕದ ನೀಲಗಿರಿ ತೋಪಿನಿಂದ ಬಂದ ಚಿರತೆ ದಾಳಿ ನಡೆಸಿದೆ. ರೈತನ ಚೀರಾಟ ಕೇಳಿ ನೀಲಗಿರಿ ಮರಗಳನ್ನು ಕಡಿಯುತ್ತಿದ್ದ ಗ್ರಾಮಸ್ಥರು ದೊಣ್ಣೆಗಳಿಂದ ಪ್ರತಿದಾಳಿ ನಡೆಸಿದರೂ ಚಿರತೆ ರೈತನ ಕತ್ತು ಸೀಳಿ, ರಕ್ತಹೀರಿ ಮೃತಪಟ್ಟ ನಂತರವೇ ಬಿಟ್ಟು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಆಕ್ರೋಶಗೊಂಡ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಮತ್ತು ಮೃತ ಕುಟುಂಬಕ್ಕೆ ಸ್ಥಳದಲ್ಲೇ ಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕ ಡಾ.ರಂಗನಾಥ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸುಮಾರು 4 ಗಂಟೆ ನಡೆದ ಪ್ರತಿಭಟನೆಯಿಂದಾಗಿ ತುಮಕೂರು– ಮೈಸೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ₹ 10 ಲಕ್ಷ ಪರಿಹಾರ ಧನ, ₹ 2 ಸಾವಿರ ಮಾಸಾಶನ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.