ಬೆಳಗಾವಿ: ‘ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ತಕ್ಷಣ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಕೋರಲು ಇದೇ ತಿಂಗಳ 26ರಂದು ನವದೆಹಲಿಗೆ ಹೋಗುತ್ತಿರುವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೂ ಕರೆದೊಯ್ಯಲು ಪ್ರಯತ್ನಿಸುವೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಯೋಜನೆಗೆ ತಗಾದೆ ತೆಗೆಯುತ್ತಿರುವ ನೆರೆಯ ಗೋವಾ ರಾಜ್ಯ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಲಿ’ ಎಂದರು.
‘ಯೋಜನೆ ಅನುಷ್ಠಾನಕ್ಕೆ ಸುಮಾರು ₹ 200 ಕೋಟಿ ಕೊಡುತ್ತೇನೆಂದು ಮುಖ್ಯಮಂತ್ರಿಯವರು ಈಗಾಗಲೇ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.
‘ಮಹದಾಯಿ ಉಗಮಸ್ಥಳವಾಗಿರುವ ಖಾನಾಪುರದ ಕಣಕುಂಬಿಗೆ ಸದ್ಯದಲ್ಲಿಯೇ ಭೇಟಿ ನೀಡುತ್ತೇನೆ. ರಾಜ್ಯಕ್ಕೆ ಹಂಚಿಕೆಯಾಗಿರುವಕೃಷ್ಣಾ ನದಿ ನೀರನ್ನು ಬಳಸಲು ಯೋಜನೆ ರೂಪಿಸಲಾಗುವುದು. ಕಾವೇರಿ ನ್ಯಾಯಾಧೀಕರದ ತೀರ್ಪು ಒಂದು ಹಂತಕ್ಕೆ ಬಂದಿದೆ. ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.
ರಾಜೀನಾಮೆ ಕೊಡುತ್ತೇನೆ:‘ಶಾಸಕ ಮಹೇಶ ಕುಮಠಳ್ಳಿ ಅವರಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನ ಸಿಗಲಿದೆ. ಅವರಿಗೆ ಅನ್ಯಾಯ ಮಾಡಲ್ಲ. ಅನ್ಯಾಯ ಆಗಿದೆ ಎಂದು ಒಂದು ಮಾತು ಹೇಳಿದ್ರೆ ನಾನು ರಾಜೀನಾಮೆ ನೀಡುವೆ’ ಎಂದು ಹೇಳಿದರು.