ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಖಾಸಗೀಕರಣ ಗೊಳಿಸುವುದನ್ನು ವಿರೋಧಿಸಿ ಕಾರ್ಮಿಕರು ಶುಕ್ರವಾರ ಪ್ರತಿಭಟಿಸಿದರು.
ಸೈಲ್ ಆಡಳಿತ ಮಂಡಳಿ ಹೊರಡಿಸಿರುವ ಮಾರಾಟ ಪ್ರಕ್ರಿಯೆಯ ಟೆಂಡರ್ ಪ್ರಕಟಣೆ ಖಂಡಿಸಿ ಬೆಳಿಗ್ಗೆ ನೂರಾರು ಕಾರ್ಮಿಕರು ಕಾರ್ಖಾನೆ ಮುಂಭಾಗ ಜಮಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ‘ಬಹಳ ವರ್ಷಗಳಿಂದ ತಡೆಹಿಡಿದಿದ್ದ ಮಾರಾಟ ಪ್ರಕ್ರಿಯೆ ಈಗ ಏಕಾಏಕಿ ಆರಂಭಗೊಂಡಿರುವುದು ಕಾರ್ಮಿಕರ ಭವಿಷ್ಯದ ಆತಂಕ ಹೆಚ್ಚಿಸಿದೆ’ ಎಂದರು.
‘ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿಗೆ ಕೂಡಲೇ ಬಂಡವಾಳ ತೊಡಗಿಸುವ ಜತೆಗೆ ಅದರ ಪುನಶ್ಚೇತನಕ್ಕೆ ಒತ್ತು ನೀಡುವ ಕೆಲಸವನ್ನು ಕೇಂದ್ರ ಸರ್ಕಾರ, ಉಕ್ಕು ಪ್ರಾಧಿಕಾರ ಮಾಡಬೇಕು’ ಎಂದು ಒತ್ತಾಯಿಸಿದರು.
‘ಸದ್ಯ ಹೋರಾಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ಮಾಡಲಾಗುವುದು’ ಎಂದು ತಿಳಿಸಿದರು.
‘ಕಾರ್ಖಾನೆಯನ್ನು ಸಾರ್ವಜನಿಕ ಉದ್ದಿಮೆಯಾಗಿ ಉಳಿಸುವಲ್ಲಿ, ಬಂಡವಾಳ ಹೂಡಿಸುವಲ್ಲಿ ವಿಫಲರಾದ ಸಂಸದ ಬಿ.ವೈ. ರಾಘವೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಹೋರಾಟದ ಜೊತೆ ಕೈ ಜೋಡಿಸಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯ ಸರ್ಕಾರ ಗಣಿ ನೀಡಿದರೆ ಬಂಡವಾಳ ಹೂಡುವುದಾಗಿ ಕೇಂದ್ರ ಉಕ್ಕು ಸಚಿವರು ಭರವಸೆ ನೀಡಿದ್ದರು. ಅದರಂತೆ ರಾಜ್ಯ ನಡೆದುಕೊಂಡಿದೆ. ಈಗ ಕೇಂದ್ರ ಸರ್ಕಾರ ತಾನು ಹೇಳಿದ ರೀತಿಯಲ್ಲಿ ನಡೆದುಕೊಂಡು ಕಾರ್ಖಾನೆ ಹಾಗೂ ಕಾರ್ಮಿಕರ ಭವಿಷ್ಯ ಉಳಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್.ಚಂದ್ರಹಾಸ, ಕಾರ್ಮಿಕ ಮುಖಂಡರಾದ ಬಸಂತಕುಮಾರ್, ರಾಘವೇಂದ್ರ, ಅಮೃತಕುಮಾರ್, ಮೋಹನ್, ಕಾಂಗ್ರೆಸ್ ಮುಖಂಡ ಚಂದ್ರೇಗೌಡ, ಕರುಣಾಮೂರ್ತಿ, ಗುತ್ತಿಗೆ ಕಾರ್ಮಿಕ ಸಂಘದ ಸುರೇಶ್, ರಾಜೇಶ್ ಹಾಜರಿದ್ದರು.