ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆಗೆ ಭಾಷಣ ಮಾಡಲು ಅವಕಾಶ ಸಿಗದೇ ಇರುವುದಕ್ಕೆ ರಾಜ್ಯ ನಾಯಕರಲ್ಲಿರುವ ‘ಭಯ’ ಕಾರಣವೇ ಎಂಬ ಚರ್ಚೆಗೆ ವಿಧಾನಸಭೆ ಮೊಗಸಾಲೆ ವೇದಿಕೆಯಾಗಿತ್ತು.
‘ಭಾಷಣಕಾರರ ಪಟ್ಟಿಯಲ್ಲಿ ಹೆಗಡೆ ಹೆಸರು ಇರಲಿಲ್ಲ. ಒಂದು ವೇಳೆ ಅವರು ಭಾಷಣ ಮಾಡಿ, ಸಂವಿಧಾನದ ಬಗ್ಗೆ ಹೇಳಿಕೆ ನೀಡಿದ್ದರೆ ಪ್ರಧಾನಿ ಮೋದಿ ಮಾತಿಗಿಂತ ದೊಡ್ಡ ವಿವಾದ ಆಗುತ್ತಿತ್ತು. ಮಾಧ್ಯಮಗಳಿಗೂ ಅದೇ ಸುದ್ದಿಯಾಗುತ್ತಿತ್ತು’ ಎಂದು ಬಿಜೆಪಿ ನಾಯಕರೊಬ್ಬರು ನಗುತ್ತಲೇ ಹೇಳಿದರು.
‘ಹೆಗಡೆ ಹೆಗಡೆ ಎಂದು ಜನ ಕೂಗುತ್ತಿದ್ದರಲ್ಲ’ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಹೇಳಿದರು. ‘ಅಯ್ಯೋ, ಹೆಗಡೆ ಮಾತನಾಡಿದ್ದರೆ ಪ್ರಧಾನಿ ಮಾರನೇ ದಿನ ದೆಹಲಿಯಲ್ಲಿ ಸ್ಪಷ್ಟನೆ ನೀಡಬೇಕಾಗುತ್ತಿತ್ತು’ ಎಂದು ಮತ್ತೊಬ್ಬ ಶಾಸಕರು ಹೇಳಿದರು.