ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಅದಿರು ಗಣಿಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ಬಿ. ನಾಗೇಂದ್ರ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬುದ್ಧಿವಂತ ಗೌಡ ವಸಂತಗೌಡ ಪಾಟೀಲ ಗುರುವಾರ ಈ ಕುರಿತಂತೆ ಆದೇಶಿಸಿದರು.
ಆರೋಪಿಗಳು ಗುರುವಾರ ಪ್ರಕರಣದ ಸಾಕ್ಷಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಹಾಜರಾಗಿರಲಿಲ್ಲ. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಧೀಶರು, ‘ಆರೋಪಿಗಳು ವಕೀಲರ ಮಾತು ಕೇಳುವುದಿಲ್ಲ. ಇವರನ್ನು ಕೋರ್ಟ್ಗೆ ಹೇಗೆ ಕರೆಯಿಸಬೇಕು ಎಂಬುದು ಗೊತ್ತಿದೆ’ ಎಂದು ವಾರಂಟ್ ಜಾರಿಗೊಳಿಸಲು ಆದೇಶಿಸಿದರು.
ಅಂತೆಯೇ ಜಾಮೀನು ಪಡೆಯಲು ಭದ್ರತೆ ನೀಡಿದ್ದ ಶ್ಯೂರಿಟಿದಾರರಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಿದರು.
ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವರದಿ ಆಧರಿಸಿ ಸಿಂಗ್ ಹಾಗೂ ನಾಗೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.