ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ದಾಸಪುರದ ಥೆರೇಜಮ್ಮ ತಮ್ಮ ಕೊಳವೆಬಾವಿಯ ನೀರನ್ನು ಊರಿನ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಊರಿನಿಂದ ಒಂದು ಕಿಲೊಮೀಟರ್ ದೂರದಲ್ಲಿರುವ ಇವರ ಜಮೀನಿನಿಂದ ಪೈಪ್ಲೈನ್ ಮೂಲಕ 170 ಮನೆಗಳಿಗೆ ನೀರನ್ನು ಒದಗಿಸುತ್ತಿದ್ದಾರೆ. ನಿತ್ಯ ಬೆಳಿಗ್ಗೆ 6 ರಿಂದ 9 ರವರೆಗೆ ಕುಡಿಯುವ ನೀರಿನ ಜತೆಗೆ ಬೆಳೆ ಉಳಿಸಿಕೊಳ್ಳಲೂ ನೀರು ಕೊಡುತ್ತಿರುವುದು ವಿಶೇಷ.
ಊರವರಿಗೆ ಕುಡಿಯುವ ನೀರಿನದೇ ಸಮಸ್ಯೆ ಇದ್ದಾಗ ಹೊಲದಲ್ಲಿ ಬೆಳೆ ಬೆಳೆಯುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಬೆಳೆಯನ್ನೇ ಬೆಳೆದಿಲ್ಲ, ಬದಲಾಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ!
‘ನಾವು ಎರಡು ವರ್ಷದ ಹಿಂದೆ ಕೊಳವೆಬಾವಿ ಕೊರೆಸಿದಾಗಲೇ ಊರಿನ ಜನರಿಗೆ ನೀರು ಕೊಡುವಂತೆ ಚರ್ಚ್ ಪಾದ್ರಿ ಆರ್.ಶಾಂತರಾಜು ಹೇಳಿದ್ದರು. ಊರಿನ ಜನರ ಹಿತ ಮುಖ್ಯ. ಕುಡಿಯುವ ನೀರಿಗೆ ಮೊದಲ ಆದ್ಯತೆ. ನಂತರ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಅವರು ನೀರು ಬಳಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಥೆರೇಜಮ್ಮ.