ಬೆಂಗಳೂರು: ನವದೆಹಲಿಯಲ್ಲಿ ಜ.26ರಂದು ನಡೆದ ‘ಗಣರಾಜ್ಯೋತ್ಸವ ದಿನ ಶಿಬಿರ’ದ ಪಥಸಂಚಲನದಲ್ಲಿ ಮೂರನೇ ಸ್ಥಾನ ಪಡೆದ ಕರ್ನಾಟಕ–ಗೋವಾ ಎನ್ಸಿಸಿ ನಿರ್ದೇಶನಾಲಯದ 106 ಕೆಡೆಟ್ಗಳನ್ನು ನಗರದಲ್ಲಿ ಭಾನುವಾರ ಸನ್ಮಾನಿಸಲಾಯಿತು.
ನಿರ್ದೇಶನಾಲಯದ ಉಪ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ್ ಅವರು ಕೆಡೆಟ್ಗಳಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿದರು. ಕೆಡೆಟ್ಗಳ ಕಾಲೇಜು ಪ್ರತಿನಿಧಿಗಳು ಹಾಗೂ ತರಬೇತುದಾರರನ್ನೂ ಗೌರವಿಸಲಾಯಿತು.
ಬಳಿಕ ಮಾತನಾಡಿದ ಪೂರ್ವಿಮಠ್, ‘ದೇಶದ 17 ಎನ್ಸಿಸಿ ನಿರ್ದೇಶನಾಲಯಗಳಲ್ಲಿ ಸುಮಾರು 13.50 ಲಕ್ಷ ಕೆಡೆಟ್ಗಳಿದ್ದಾರೆ. ರಾಜ್ಯದಲ್ಲಿ 85 ಸಾವಿರ ಕೆಡೆಟ್ಗಳು ಇದ್ದಾರೆ. ನಮ್ಮ ಕೆಡೆಟ್ಗಳು ಗಣರಾಜ್ಯೋತ್ಸವ ಪಥಸಂಚಲನದಲ್ಲಿ 3ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ’ ಎಂದರು.
‘ಸತತ 25 ವರ್ಷಗಳಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನೇ ಪಡೆಯುತ್ತ ಬಂದಿದ್ದೇವೆ. ಇದು ದಾಖಲೆಯೇ ಸರಿ. ಮುಂದಿನ ಬಾರಿ ಮೊದಲ ಸ್ಥಾನವನ್ನು ಪಡೆಯುವುದೇ ನಮ್ಮ ಗುರಿ. ಅದಕ್ಕಾಗಿ ಕೆಡೆಟ್ಗಳನ್ನು ಈಗಿ
ನಿಂದಲೇ ಸಜ್ಜುಗೊಳಿಸಲಿದ್ದೇವೆ’ ಎಂದು ಹೇಳಿದರು.
‘ಶ್ರೇಯಸ್, ಸಾಗರಿಕಾ ಶ್ಯಾಮನೂರು ಹಾಗೂ ಕೆ.ವರ್ಷಾ ‘ದೇಶದ ಅತ್ಯುತ್ಯಮ ಕೆಡೆಟ್’ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ 18 ಕೆಡೆಟ್ಗಳು ವಿದೇಶಕ್ಕೆ ಹೋಗಿ ಅಲ್ಲಿನ ಕೆಡೆಟ್ಗಳ ಜತೆ ತರಬೇತಿ ಪಡೆಯಲು ಅರ್ಹತೆ ಪಡೆದಿದ್ದಾರೆ’ ಎಂದು ನಿರ್ದೇಶನಾಲಯದ ನಿರ್ದೇಶಕ ಕೆ.ಬಿ.ಜಯರಾಜ್ ಹೇಳಿದರು.
ಕೆಡೆಟ್ಗಳು ನವದೆಹಲಿಯಲ್ಲಿ ಪ್ರದರ್ಶಿಸಿದ್ದ ಯಕ್ಷಗಾನ, ಪೂಜಾ ಕುಣಿತ, ಭೂತ ಕುಣಿತ, ಬ್ಯಾಲೆ ನೃತ್ಯವನ್ನು ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಪ್ರದರ್ಶಿಸಿ ನೆರೆದಿದ್ದವರನ್ನು ರಂಜಿಸಿದರು.
‘ನವದೆಹಲಿಯ ಪಥಸಂಚಲನದಲ್ಲಿ ಹೆಜ್ಜೆ ಹಾಕಬೇಕೆಂಬುದು ಪ್ರತಿಯೊಬ್ಬ ಕೆಡೆಟ್ನ ಕನಸು. ಆ ಅವಕಾಶ ಸಿಕ್ಕಿದ್ದೆ ನನ್ನ ಪುಣ್ಯ. ಆ ಅಮೋಘ ಗಳಿಗೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ’ ಎಂದು ಕೆ.ವರ್ಷಾ ತಿಳಿಸಿದರು.