ಚಿತ್ರದುರ್ಗ: ಕನ್ನಡ ಭಾಷೆ, ಧ್ವಜ ಹಾಗೂ ನಾಡಿನ ವೈವಿದ್ಯಮಯ ಸಂಸ್ಕೃತಿಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರು. ದೇಶದ ವಿಚಾರ ಬಂದಾಗ ರಾಷ್ಟ್ರವೇ ಮೊದಲು. ದೇಶದ ಅಖಂಡತೆ ಮತ್ತು ಸಮಗ್ರತೆಗೆ ನಮ್ಮ ಮೊದಲ ಆದ್ಯತೆ. ಭಾಷೆ, ಆಹಾರ, ನೆಲ–ಜಲದ ವಿಚಾರದಲ್ಲಿ ನಮ್ಮನ್ನು ಒಡೆಯುವ ಹುನ್ನಾರವನ್ನು ಕೆಲ ಶಕ್ತಿಗಳು ಮಾಡುತ್ತಿವೆ’ ಎಂದರು.
‘ಇಲ್ಲಸಲ್ಲದ ಭೇದ ಭಾವ ಮೂಡಿಸಿ ಸ್ವಾರ್ಥ ಸಾಧಿಸುವವರನ್ನು ಕಂಡಿದ್ದೇವೆ. ಇನ್ನು ಮುಂದೆ ಹೀಗೆ ಆಗದಂತೆ ರಾಜ್ಯ ಮತ್ತು ರಾಷ್ಟ್ರವನ್ನು ಮುನ್ನಡೆಸುತ್ತೇವೆ’ ಎಂದು ಹೇಳಿದರು.
‘ಸದನದ ಕಲಾಪವನ್ನು ನೇರವಾಗಿ ಜನರಿಗೆ ತೋರಿಸುತ್ತೇವೆ. ಯಾವ ವಿಷಯವನ್ನು ಮುಚ್ಚಿಡಲು ಬಯಸುವುದಿಲ್ಲ. ಮಾಧ್ಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆ’ ಎಂದು ವಿಧಾನಮಂಡಲ ಅಧಿವೇಶನಕ್ಕೆ ಮಾಧ್ಯಮಗಳಿಗೆ ಹೇರಿದ ನಿರ್ಬಂಧಕ್ಕೆ ಪ್ರತಿಕ್ರಿಯೆ ನೀಡಿದರು.