ಗೊಟಗೋಡಿ (ಹಾವೇರಿ ಜಿಲ್ಲೆ): ಹಿರಿಯ ಸಂಶೋಧನಾ ಅಧಿಕಾರಿ ಹುದ್ದೆಯಿಂದ ಡಾ. ಕೆ. ಪ್ರೇಮಕುಮಾರ್ ಅವರನ್ನು ಬಿಡುಗಡೆಗೊಳಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶ ಮತ್ತು ಸಿಂಡಿಕೇಟ್ ಸಭೆಯ ನಿರ್ಣಯದಂತೆ, ಅವರನ್ನು ಜ.30ರಂದು ಮಧ್ಯಾಹ್ನ ಬಿಡುಗಡೆಗೊಳಿಸಲಾಗಿದೆ ಎಂದು ಪ್ರಭಾರ ಕುಲಪತಿ ಡಾ.ಡಿ.ಬಿ. ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಉಪ ಕುಲಸಚಿವರಾಗಿದ್ದ ಪ್ರೇಮಕುಮಾರ್ ಅವರನ್ನು ಜಾನಪದ ವಿಶ್ವವಿದ್ಯಾಲಯಕ್ಕೆ ಹಿರಿಯ ಸಂಶೋಧನಾಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು. ನಂತರ, ಅವರನ್ನು ಇಲ್ಲಿನ ಭಾಷಾಂತರ ಕೇಂದ್ರದ ನಿರ್ದೇಶಕ ಮತ್ತು ಪ್ರಾಧ್ಯಾಪಕ ಹುದ್ದೆಯಲ್ಲಿ ವಿಲೀನಗೊಳಿಸುವಂತೆ 2014ರ ಏಪ್ರಿಲ್ 11ರಂದು ನಡೆದ ಸಿಂಡಿಕೇಟ್ ಸಭೆ ನಿರ್ಣಯ ಅಂಗೀಕರಿಸಿತ್ತು. ಆದರೆ ಈ ವಿಲೀನವನ್ನು ರದ್ದುಗೊಳಿಸಿದ್ದ ಸರ್ಕಾರ, ಅವರನ್ನು ಮರಳಿ ಮಾತೃ ಸಂಸ್ಥೆಗೆ (ಕನ್ನಡ ವಿಶ್ವವಿದ್ಯಾಲಯ) ಕಳುಹಿಸುವಂತೆ ಆದೇಶ ಹೊರಡಿಸಿತ್ತು.
ಪ್ರೇಮಕುಮಾರ್ ಇದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಆದೇಶ ಎತ್ತಿ ಹಿಡಿದ ನ್ಯಾಯಾಲಯ, ಅವರ ಅರ್ಜಿ ವಜಾಗೊಳಿಸಿ ಜ. 19ರಂದು ಆದೇಶ ನೀಡಿತ್ತು. ಈ ಆದೇಶದ ಅನ್ವಯ ಅವರನ್ನು ಬಿಡುಗಡೆಗೊಳಿಸಲು ಜ.29ರಂದು ನಡೆದ ಸಿಂಡಿಕೇಟ್ ಸಭೆ ನಿರ್ಣಯಿಸಿತ್ತು.
ಈ ಬಗ್ಗೆ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದ ಪ್ರೇಮಕುಮಾರ್, ತಾವು ಜ.18ರಿಂದ ರಜೆಯ ಮೇಲೆ ತೆರಳಿದ್ದು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.