ಬೆಂಗಳೂರು: ಕೊರೋನಾ ವೈರಸ್ ಭೀತಿಯಲ್ಲಿ ಮುಳುಗಿರುವ ಕರ್ನಾಟಕ ಏಕಾಏಕಿ ಸ್ತಬ್ಧತೆಯ ಕ್ರಮ ಅನುಸರಿಸಿದೆ.
ರೋಗ ತಡೆಯುವ ಉದ್ದೇಶದಿಂದ ಜನಸಂದಣಿ ಸೇರುವುದನ್ನು ನಿಯಂತ್ರಿಸಲು ಹೊರಟಿರುವ ರಾಜ್ಯ ಸರ್ಕಾರ ನಾಳೆಯಿಂದ ಒಂದು ವಾರದ ಮಟ್ಟಿಗೆ ರಾಜ್ಯಾದ್ಯಂತ ಮಾಲ್ಗಳು, ಚಿತ್ರಮಂದಿರಗಳು, ನೈಟ್ ಕ್ಲಬ್ಗಳನ್ನು ಮುಚ್ಚುವಂತೆ ಆದೇಶಿಸಿದೆ. ಬೇಸಿಗೆ ಶಿಬಿರಗಳು, ಸಭೆ ಸಮಾರಂಭಗಳು, ಕ್ರೀಡಾಕೂಟ, ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ. ಸರ್ಕಾರ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಸರ್ಕಾರಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ವಿಶ್ವವಿದ್ಯಾಲಯ, ಕಾಲೇಜುಗಳೂ ಒಂದು ವಾರ ಕಾರ್ಯನಿರ್ವಹಿಸಬಾರದು ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿ ಶ್ರೀ @BSYBJP ಅವರು, ಕರೊನಾ ವೈರಸ್ ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಿದರು.
— CM of Karnataka (@CMofKarnataka) March 13, 2020
ಉಪ ಮುಖ್ಯಮಂತ್ರಿಗಳಾದ @GovindKarjol, @drashwathcn, ಸಚಿವರಾದ @sriramulubjp , @nimmasuresh, @mla_sudhakar, ಡಾ. ದೇವಿಶೆಟ್ಟಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಸಿಎಂ ಅವರ ಸಲಹೆಗಾರ ಎಂ ಲಕ್ಷ್ಮೀನಾರಾಯಣ್ ಇದ್ದರು pic.twitter.com/f8amYTwIrb
ಇದಕ್ಕೂ ಮೊದಲು ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಿದ ಕರ್ನಾಟಕ ಸರ್ಕಾರ ಕಲಬುರಗಿಯಲ್ಲಿ ಸಾವು ಪ್ರಕರಣ ವರದಿಯಾಗುತ್ತಲೇ ಮತ್ತಷ್ಟು ಕಾರ್ಯಪ್ರವೃತ್ತವಾಗಿದೆ. ಜನರು ಸಾಮೂಹಿಕವಾಗಿ ಸೇರಬಲ್ಲ ಪ್ರದೇಶಗಳನ್ನು ನಿರ್ಬಂಧಿಸ ಹೊರಟಿದೆ.
ಸೋಂಕು ಬಾಧಿತರು ಓಡಾಡಿದಲ್ಲೆಲ್ಲ, ಜನರಿಗೆ ಗೊತ್ತಿಲ್ಲದೇ ಸೋಂಕು ತಗುಲುವ ಆತಂಕವಿದೆ. ವಿಮಾನ, ಆಟೋ, ಟ್ಯಾಕ್ಸಿ, ಬಸ್ಸುಗಳಲ್ಲಿ, ಅವರ ಕಚೇರಿ, ವಾಸ ಸ್ಥಳ, ಬಂಧುಗಳ ಸಂಪರ್ಕವೂ ಸೋಂಕು ಹರಡಲು ಕಾರಣವಾಗಬಹುದು. ಸಾಮೂಹಿಕ ಜನಸಂಪರ್ಕವನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶ.
ನಿರ್ಬಂಧದ ಹಿಂದಿನ ಮೂಲ ಉದ್ದೇಶವೇನು?
ರಾಜ್ಯದಲ್ಲಿ ಈಗಾಗಲೇ ಐವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಹೀಗಿರುವಾಗಲೇ, ಇಡೀ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕೋವಿಡ್ ಸಾವಿನ ಪ್ರಕರಣ ವರದಿಯಾಗಿದೆ. ಇದು ಸಹಜವಾಗಿಯೇ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಆರೋಗ್ಯ ಸೇವೆ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿದೆ.
ಇದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಾಯಿಲೆ ಇನ್ನೂ ಹೆಚ್ಚು ಮಂದಿಗೆ ಹರಡದಂತೆ ಮಾಡಲು ಮತ್ತು ಯಾವುದೇ ಸಾವಿನ ಪ್ರಕರಣಗಳು ಸಂಭವಿಸದಂತೆ ತಡೆಯಲು ಶತ ಪ್ರಯತ್ನ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.