ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಪಿ ಹಾಕಿದವರ ಮೇಲೆ ಭಯವಿಲ್ಲವೇಕೆ?: ಸಂಸದ ಪ್ರಹ್ಲಾದ ಜೋಶಿ ಪ್ರಶ್ನೆ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ವಿರುದ್ಧ ಗರಂ
Last Updated 10 ಮಾರ್ಚ್ 2019, 11:37 IST
ಅಕ್ಷರ ಗಾತ್ರ

ಧಾರವಾಡ: ‘ನಾಮ ಹಾಕಿದವರನ್ನು ಕಂಡರೆ ಭಯ ಎನ್ನುವ ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿದವರ ಕುರಿತು ಭಯವಿಲ್ಲ ಏಕೆ?’ ಎಂದು ಸಂಸದ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಸಂಸದರಾಗಿ ಐದು ವರ್ಷಗಳ ಸಾಧನೆ ಕುರಿತು ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಹೀಯಾಳಿಸಲು ಹಿಂದೂ ಧರ್ಮ ಬಿಟ್ಟಿ ಬಿದ್ದಿದೆಯೇ? ಇಂಥ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲಾ ಮುಸ್ಲೀಮರು ಭಯೋತ್ಪಾದಕರು ಅಲ್ಲದಿರಬಹುದು. ಆದರೆ ಭಯೋತ್ಪಾದಕರು ಎಲ್ಲರೂ ಮುಸ್ಲೀಮರೇ ಎನ್ನುವುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.

‘ತಾನೂ ಹಿಂದು, ದೇವಾಲಯಕ್ಕೆ ಹೋಗುತ್ತೇನೆ ಎಂದು ಒಂದೆಡೆ ಸಿದ್ದರಾಮಯ್ಯ ಹೇಳುತ್ತಾರೆ. ಮತ್ತೊಂದೆಡೆ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತಾನು ಬ್ರಾಹ್ಮಣ ಎಂದು ಹೇಳಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹೀಗಿದ್ದರೂ ಇವರ ಹಿಂದೂ ವಿರೋಧಿ ಹೇಳಿಕೆ ಮುಂದುವರಿಸಿದ್ದಾರೆ’ ಎಂದು ಕಿಡಿ ಕಾರಿದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ದೇಶದ ಜನ ಚೌಕದಾರ ಎಂದು ಒಪ್ಪಿಕೊಂಡಿದೆ. ಆದರೆ ರಾಹುಲ್ ಗಾಂಧಿ ಪದೇ ಪದೇ ಅವರನ್ನು ‘ಚೋರ್‌’ ಎಂದು ಅಸಂವಿಧಾನಿಕ ಪದವನ್ನು ಬಳಸುತ್ತಿದ್ದಾರೆ. ಹೀಗೆ ಹೇಳುವ ಮೊದಲು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸ್ವತಃ ಜಾಮೀನಿನ ಮೇಲೆ ಇರುವುದನ್ನು ಅವರು ನೆನಪು ಮಾಡಿಕೊಳ್ಳಬೇಕು. ಅವರು ಬಳಸುವ ಪದಗಳನ್ನು ನಾವೂ ಬಳಸಲೂ ಬರುತ್ತದೆ ಎಂಬುದನ್ನೂ ಗಮದಲ್ಲಿಟ್ಟುಕೊಳ್ಳಬೇಕು’ ಎಂದರು.

‘ಜವಾಹರಲಾಲ್ ನೆಹರೂ ಕಾಲದಿಂದಲೂ ಒಂದಲ್ಲಾ ಒಂದು ಹಗರಣದಲ್ಲಿರುವ ಕಾಂಗ್ರೆಸ್‌ ಕುಟುಂಬ, ಈವರೆಗೂ ಊಟ, ಮನೆ ಮತ್ತು ಓಡಾಡುವ ವಾಹನಗಳನ್ನು ಸರ್ಕಾರದ ದುಡ್ಡಿನಲ್ಲೇ ಅನುಭವಿಸುತ್ತಿದೆ. ವಿರೋಧಪಕ್ಷವೂ ಆಗಲು ಲಾಯಕ್‌ ಇಲ್ಲದಂತೆ ಜನರು ಹೀನಾಯ ಸೋಲುಣಿಸಿದ್ದಾರೆ. ತಮ್ಮ ಸ್ಥಿತಿ ಹೀಗಿರುವಾಗಿ ಮತ್ತೊಬ್ಬರ ಕುರಿತು ಮಾತನಾಡುವ ನೈತಿಕತೆ ಇವರಿಗಿಲ್ಲ’ ಎಂದರು.

‘ರಾಹುಲ್ ಗಾಂಧಿ ಶನಿವಾರ ಬುದ್ಧಿ ಜೀವಿಗಳೊಂದಿಗೆಹುಬ್ಬಳ್ಳಿಯಲ್ಲಿ ಸಂವಾದ ನಡೆಸಿದ್ದಾರೆ. ಇದರಲ್ಲಿ ಕೆಲವರು ರಾಹುಲ್ ಅವರನ್ನು ಬುದ್ಧಿವಂತ ಎಂದು ಬಣ್ಣಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಈ ಬುದ್ಧಿಜೀವಿಗಳ ಬುದ್ಧಿ ಕುರಿತೇ ನನಗೆ ಅನುಮಾನವಿದೆ’ ಎಂದು ಜೋಶಿ ಲೇವಡಿ ಮಾಡಿದರು.

ಸುಮಲತಾ ಕುರಿತು ರೇವಣ್ಣ ಆಡಿರುವ ಮಾತು ಮತ್ತು ಇದೇ ಪ್ರಕರಣಕ್ಕೆ ಕೆ.ಎಸ್‌. ಈಶ್ವರಪ್ಪ ಆಡಿರುವ ಮಾತಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಶಿ, ‘ಯಾವುದೇ ಪಕ್ಷದ ನಾಯಕರಾಗಲಿ ವೈಯಕ್ತಿಕ ವಿಚಾರಗಳಲ್ಲಿ ಅಸಂಬದ್ಧ ಹೇಳಿಕೆ ನೀಡಬಾರದು. ಈಶ್ವರಪ್ಪ ಅವರ ಹೇಳಿಕೆಯನ್ನೂ ನಾನು ಒಪ್ಪುವುದಿಲ್ಲ’ ಎಂದರು.

ಮುಸ್ಲೀಮರ ಮಗ ಬ್ರಾಹ್ಮಣ ಹೇಗಾದ ಎಂದು ರಾಜೀವ ಗಾಂಧಿ ಕುರಿತು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ ಜೋಶಿ, ‘ಅವರು ಹೇಗೆ ಇತಿಹಾಸ ಅರ್ಥೈಸಿಕೊಂಡಿದ್ದಾರೆ ಗೊತ್ತಿಲ್ಲ. ಇದನ್ನು ಪರಿಶೀಲಿಸಿ ಪ್ರತಿಕ್ರಿಯಿಸುತ್ತೇನೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT