ಮೈಸೂರು: ‘ನಾನು ಜೆಡಿಎಸ್ ಪಕ್ಷದಿಂದ ಗೆದ್ದಿದ್ದೇನೆ, ಜೆಡಿಎಸ್ನಲ್ಲೇ ಇರುತ್ತೇನೆ. ಶಾಸಕ ಸ್ಥಾನದ ಅವಧಿ ಮುಗಿಯಲು ಇನ್ನೂ ಮೂರು ವರ್ಷಗಳಿದ್ದು, ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ’ ಎಂದು ಶಾಸಕ ಜಿ.ಟಿ.ದೇವೇಗೌಡ ಭಾನುವಾರ ಇಲ್ಲಿ ತಿಳಿಸಿದರು.
‘ಅಸಮಾಧಾನವಿದ್ದವರು ಪಕ್ಷ ಬಿಟ್ಟು ಹೋಗಲಿ ಎಂಬುದಾಗಿ ಎಚ್.ಡಿ.ದೇವೇಗೌಡರು ನೇರವಾಗಿ ಹೇಳಿದ್ದಾರೆ. ಕಾರ್ಯಕರ್ತರು ಪಕ್ಷದ ಆಸ್ತಿ ಎಂಬ ಅವರು ಮಾತು ನಿಜ’ ಎಂದರು.
ಮತ್ತೆ ಸಿ.ಎಂ ಆಗಲಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇನ್ನೂ ವಯಸ್ಸಿದೆ. ಜೊತೆಗೆ ದೈವಬಲವೂ ಇದೆ. ಹೀಗಾಗಿ, ಪಕ್ಷದಲ್ಲಿ ಯಾರೇ ಇರಲಿ, ಯಾರೇ ಹೋಗಲಿ ಮತ್ತೆ ಮುಖ್ಯಮಂತ್ರಿಯಾಗುವ ವಿಶ್ವಾಸ ಅವರಿಗೆ ಇದೆ. ಒಂದಲ್ಲ ಎರಡು ಬಾರಿ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.
₹ 100 ಕೋಟಿ ಕೇಳಿದ್ದೆ: ಮೈಸೂರಿನಲ್ಲಿ ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ, ಬಡಾವಣೆಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ₹ 100 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಆದರೆ, ಬಿಡುಗಡೆ ಮಾಡಲಿಲ್ಲ ಎಂದು ತಿಳಿಸಿದರು.
‘ಶಾಸಕ ಉಮೇಶ್ ಕತ್ತಿ ಸೇರಿದಂತೆ ಹಲವರು ಬಜೆಟ್ನಲ್ಲಿ ತಮ್ಮ ಭಾಗಕ್ಕೆ ಅನುದಾನ ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮದೂ ಅದೇ ಸಮಸ್ಯೆ. ಹಿಂದೆ ಘೋಷಣೆ ಆಗಿದ್ದ ಯೋಜನೆಗಳನ್ನೂ ತಡೆ ಹಿಡಿಯಲಾಗಿದೆ’ ಎಂದರು.
ಕೇಂದ್ರದಿಂದಲೇ ಈ ಬಾರಿ ಅನುದಾನ ಕಡಿತವಾಗಿದೆ. ಜೊತೆಗೆ ಸಾಲಮನ್ನಾ ಬೇರೆ ಇದೆ. ಇದನ್ನು ಸರಿದೂಗಿಸಿಕೊಂಡು ಹೋಗುವುದೇ ಸವಾಲಾಗಿದೆ. ಈಗಿನ ಹಣಕಾಸು ಪರಿಸ್ಥಿತಿಯಲ್ಲಿ ಯಾರೇ ಇದ್ದರೂ ಏನು ಮಾಡಲು ಆಗುವುದಿಲ್ಲ ಎಂದು ನುಡಿದರು.