‘ಮಗಳನ್ನು ಸೇನೆಗೆ ಕಳುಹಿಸಬೇಡ; ಸಾವು ಖಚಿತ ಎಂದು ಅಕ್ಕಪಕ್ಕದ ಮನೆಯವರು, ಗ್ರಾಮದ ಕೆಲವರು ಹೇಳಿದ್ದರು. ಆದರೆ, ದೇಶಸೇವೆ ಮಾಡುವಂತಹ ಪುಣ್ಯದ ಕೆಲಸ ಯಾವುದೂ ಇಲ್ಲ ಎಂದು ಧೈರ್ಯದಿಂದ ಒಪ್ಪಿಗೆ ನೀಡಿದ್ದೆ. ಆಯ್ಕೆಯಾದ ನಂತರ ಒಂದು ವರ್ಷ ಅವಳ ಸಂಪರ್ಕವೇ ಇರಲಿಲ್ಲ. ಆಕೆಗೆ ಏನಾಯಿತೋ ಎಂಬ ಚಿಂತೆ ಕಾಡುತ್ತಿತ್ತು. ಒಂದು ದಿನ ಅನಾಮಧೇಯ ಕರೆ ಬಂದು, ‘ಅಮ್ಮಾ... ನಾನು ಅಭಿಲಾಷ. ಈಗಷ್ಟೇ ತರಬೇತಿ ಮುಗಿಯಿತು ಗುಜರಾತಿನಲ್ಲಿ ಇದ್ದೇನೆ’ ಎಂದಾಗ ನಿಟ್ಟುಸಿರು ಬಿಟ್ಟೆ’ ಎಂದು ಸ್ಮರಿಸುತ್ತಾರೆ ನಾಗರಾಜಮ್ಮ. ಅಭಿಲಾಷ ಅವರು 10 ವರ್ಷಗಳ ಅವಧಿಯಲ್ಲಿ ಮಣಿಪುರ, ಗುಜರಾತ್ ಮತ್ತು ದೆಹಲಿಯಲ್ಲಿ ಸೇವೆ ಸಲ್ಲಿಸಿ ಈಗ ತೆಲಂಗಾಣದಲ್ಲಿದ್ದಾರೆ.