ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ: ಎಸ್‌.ಟಿ. ಸೋಮಶೇಖರ್‌ಗೆ ಫಲ ನೀಡಿದ 'ಗೌಡ' ಭಿತ್ತಿ‍ಪತ್ರ

Last Updated 9 ಡಿಸೆಂಬರ್ 2019, 10:39 IST
ಅಕ್ಷರ ಗಾತ್ರ

ಬೆಂಗಳೂರು: ಒಕ್ಕಲಿಗರ ಮತಗಳೇ ನಿರ್ಣಾಯಕವಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎಸ್.ಟಿ.ಸೋಮಶೇಖರ್‌ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ನಿಂದ ಅನರ್ಹಗೊಂಡು ಬಿಜೆಪಿಯಿಂದ ಕಣಕ್ಕಿಳಿದಿದ್ದ ಸೋಮಶೇಖರ್‌ ಅವರು 99,067 ಮತಗಳಿಂದ ಗೆಲುವಿನ ನಗು ಬೀರಿದ್ದಾರೆ. ಜೆಡಿಎಸ್‌ನ ಜವರಾಯಿಗೌಡ - 83,959, ಕಾಂಗ್ರೆಸ್‌ನ ಪಿ.ನಾಗರಾಜ್ - 9193 ಮತ ಪಡೆದಿದ್ದರೆ. ಒಟ್ಟು 1,979 ನೋಟಾ ಮತಗಳು ಚಲಾವಣೆಯಾಗಿವೆ.

2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆಯ ಬಳಿಕ ಸೃಷ್ಟಿಯಾಗಿರುವ ಯಶವಂತಪುರದಲ್ಲಿ ಈವರೆಗೆ ಮೂರು ಚುನಾವಣೆಗಳು ನಡೆದಿವೆ. ಮೊದಲಿಗೆ ಬಿಜೆಪಿಯ ಶೋಭಾ ಕರಂದ್ಲಾಜೆ ಜಯ ಗಳಿಸಿದ್ದರೆ, ನಂತರದ ಎರಡು ಚುನಾವಣೆಗಳಲ್ಲಿ ಗೆದ್ದವರು ಆಗ ಕಾಂಗ್ರೆಸ್‌ನಲ್ಲಿದ್ದ ಎಸ್.ಟಿ. ಸೋಮಶೇಖರ್‌.

ಬಿಜೆಪಿಯನ್ನು ಟೀಕಿಸುತ್ತಲೇ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಸೋಮಶೇಖರ್‌ ಈಗ ಬಿಜೆಪಿಗೆ ಮತ ನೀಡಿ ಎಂದು ಕೇಳಿದ್ದರು. ಜೆಡಿಎಸ್‌ ಭದ್ರ ನೆಲೆಯಿದ್ದರೂ ಈವರೆಗೂ ತೆನೆ ಹೊತ್ತ ಮಹಿಳೆಯ ಕೈಯನ್ನು ಕ್ಷೇತ್ರದ ಮತದಾರರು ಹಿಡಿದಿಲ್ಲ. ಈ ಬಾರಿ ಬಿಜೆಪಿ–ಜೆಡಿಎಸ್ ಮಧ್ಯೆ ಪೈಪೋಟಿ ಉಂಟಾಗಿತ್ತು.ಜೆಡಿಎಸ್‌ನ ಜವರಾಯಿಗೌಡ83,959 ಮತಗಳನ್ನು ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ 10,711 ಮತಗಳ ಕಡಿಮೆ ಅಂತರದಿಂದ ಇವರು ಸೋತಿದ್ದರು.

ಬಿಬಿಎಂಪಿಯ ಐದು ವಾರ್ಡ್‌ಗಳು ಹಾಗೂ 17 ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಈ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ.

ಸೋಮಶೇಖರ್‌ ಅವರು ಎಸ್.ಟಿ. ಸೋಮಶೇಖರ್‌ ‘ಗೌಡ’ ಎಂಬ ಭಿತ್ತಿಪತ್ರಗಳನ್ನು ಬರೆಸಿ ಮತಗಳ ಭೇಟೆಗೆ ಭಿನ್ನ ಯತ್ನವನ್ನು ಈ ಚುನಾವಣೆಯಲ್ಲಿ ಮಾಡಿದ್ದರು.

ಕಾಂಗ್ರೆಸ್‌ನ ಇಬ್ಬರು ಪಾಲಿಕೆ ಸದಸ್ಯರು, ಕಾಂಗ್ರೆಸ್‌ ಬೆಂಬಲಿತ 15 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು ಸೋಮಶೇಖರ್‌ ಹಿಂದೆ ಹೋಗಿತ್ತು ಕಾಂಗ್ರೆಸ್‌ಗೆ ಭಾರಿ ಪೆಟ್ಟು ನೀಡಿತು. ಜೊತೆಗೆ ಕ್ಷೇತ್ರದಲ್ಲಿ ಸಚಿವ ಆರ್. ಅಶೋಕ, ಶೋಭಾ ಕರಂದ್ಲಾಜೆ, ನಟ ಜಗ್ಗೇಶ್‌ ಪ್ರಭಾವ ಸೋಮಶೇಖರ್ ಗೆಲುವಿಗೆ ನೆರವಾಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT