ಬೆಂಗಳೂರು: ಪೀಣ್ಯ ಮೇಲ್ಸೇತುವೆ ಬಳಿ ಜೆಸಿಬಿ-ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯಾದಗಿರಿಯ ನಾಗರಾಜು (22) ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಜೆಸಿಬಿ ವಾಹನ ಖರೀದಿಸಲೆಂದು ಸಂಬಂಧಿ ಗುರುಪ್ರಸಾದ್ ಜತೆ ಅವರು ನಗರಕ್ಕೆ ಬಂದಿದ್ದರು. ಜೆಸಿಬಿ ವಾಹನ ಖರೀದಿಸಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.
ರಾಕ್ಲೈನ್ ಮಾಲ್ ಸಮೀಪದ ಪೀಣ್ಯ ಮೇಲ್ಸುತುವೆ ಬಳಿ ಜೆಸಿಬಿಯಲ್ಲಿ ಡಿಸೇಲ್ ಖಾಲಿಯಾಗಿತ್ತು. ಬಳಿಕ ಡೀಸೆಲ್ ತುಂಬಿಸಿದ್ದರೂ ಅದು ಸ್ಟಾರ್ಟ್ ಆಗಿರಲಿಲ್ಲ. ಹೀಗಾಗಿ, ನಾಗರಾಜು ವಾಹನ ಪರಿಶೀಲನೆ ಮಾಡುತ್ತಿದ್ದರು.
ಆಗ ಹಿಂದೆಯಿಂದ ವೇಗವಾಗಿ ಬಂದ ಕ್ಯಾಂಟರ್, ಜೆಸಿಬಿಗೆ ಗುದ್ದಿದೆ. ಜೆಸಿಬಿಯು ನಾಗರಾಜು ಮೈ ಮೇಲೆ ಹರಿದಿದೆ. ಕೂಡಲೇ ಅವರನ್ನು ಪೀಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದರು.
ಪ್ರಕರಣ ಸಂಬಂಧ ಕ್ಯಾಂಟರ್ ಚಾಲಕ ಹಾಸನದ ರವೀಶ್ (30) ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದರು.