ದುಬೈ:ವೀಸಾ ಅವಧಿಮುಗಿದರೂ ದೇಶದಲ್ಲಿ ಉಳಿದುಕೊಂಡಿದ್ದ ರಾಜಸ್ಥಾನ ಕಾರ್ಮಿಕರಿಗೆ ದಂಡ ವಿಧಿಸಲಾಗಿದ್ದು, ಅದನ್ನು ಪಾವತಿಸಲು ಸಾಧ್ಯವಾಗದವರಿಗೆ ಭಾರತಕ್ಕೆ ಮರಳುವ ಅವಕಾಶವನ್ನು ಯುಎಇ ನಿರಾಕರಿಸಿದೆ.
ವಿಶೇಷ ವಿಮಾನದ ಮೂಲಕ ಜೈಪುರಕ್ಕೆ ಮರಳಲು ಜುಲೈ 17 ರಂದು 40 ಕಾರ್ಮಿಕರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರಲ್ಲಿ ಹತ್ತು ಮಂದಿ ಮಾತ್ರವೇ ದಂಡವನ್ನು ಪಾವತಿಸಿ ದೇಶಕ್ಕೆ ಮರಳಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
‘ನಮಗೆ ದಂಡ ಪಾವತಿ ಮಾಡಬೇಕೆಂಬ ಮಾಹಿತಿ ಇರಲಿಲ್ಲ. 2 ಲಕ್ಷದವರೆಗೂ ಗರಿಷ್ಠ ದಂಡ ವಿಧಿಸಲಾಗಿದೆ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.
ನಾಲ್ಕು ದಿನಗಳಿಂದ ಕಾರ್ಮಿಕರು ವಿಮಾನ ನಿಲ್ಧಾಣದಲ್ಲಿಯೇ ನೆಲೆಸಿದ್ದರು. ನಂತರ, ದುಬೈನಲ್ಲಿನ ಭಾರತೀಯ ರಾಯಭಾರಿ ಕಚೇರಿ ಇವರ ನೆರವಿಗೆ ಬಂದಿದೆ. ಪ್ರಸ್ತುತ ಕಾರ್ಮಿಕರಿಗೆ ಕಂಪನಿಯೇ ವಸತಿ ಸೌಕರ್ಯ ಕಲ್ಪಿಸಿದೆ. ಅವರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ದಂಡದ ವಿವಾದ ಇನ್ನೂ ಬಗೆಹರಿಯದಿದ್ದರೂ ಕಂಪನಿಯು ಈ ಕಾರ್ಮಿಕರಿಗೆ ಜುಲೈ 27 ರಂದು ಭಾರತಕ್ಕೆ ಮರಳಲು ಮತ್ತೊಂದು ವಿಶೇಷ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದೆ.