ಕಠ್ಮಂಡು: ನೇಪಾಳದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಪ್ರಧಾನಿ ಅವರ ಪತ್ರಿಕಾ ಸಲಹೆಗಾರ ಸೂರ್ಯ ಥಾಪ ಹೇಳಿದ್ದಾರೆ.
ನೇಪಾಳ ಕಮ್ಯುನಿಸ್ಟ್ ಪಕ್ಷದ 45 ಸದಸ್ಯರನ್ನು ಒಳಗೊಂಡಿರುವ ಸ್ಥಾಯಿ ಸಮಿತಿ ಸಭೆ ಸೋಮವಾರ ನಡೆಯಬೇಕಿತ್ತು. ಈ ಸಭೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿಸಲಾಗಿತ್ತು.
ಸಭೆ ಮುಂದೂಡಿರುವುದಕ್ಕೆ ಕಾರಣಗಳು ತಿಳಿದು ಬಂದಿಲ್ಲ. ಸ್ಥಾಯಿ ಸಮಿತಿ ಸಭೆ ಶನಿವಾರ ಕೂಡ ಸೇರಿತ್ತು. ವಿಷಯದ ಬಗ್ಗೆ ಒಮ್ಮತಕ್ಕೆ ಬರಲು ಕಾಲಾವಕಾಶ ಬೇಕೆಂದು ಹೇಳಿ ಅದನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ಮಾಜಿ ಪ್ರಧಾನಿ ಪುಷ್ಪ ಕಮಲ್ ಸೇರಿದಂತೆ ಎನ್ಸಿಪಿಯ ಹಿರಿಯ ನಾಯಕರು ಪ್ರಧಾನಿ ಒಲಿ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಒಲಿ ಅವರು ಭಾರತದ ವಿರುದ್ಧ ಹೇಳಿರುವ ಮಾತುಗಳು ರಾಜಕೀಯವಾಗಿ ಅಥವಾ ರಾಜತಾಂತ್ರಿಕವಾಗಿ ಸೂಕ್ತವಾದದ್ದಲ್ಲ ಎಂದು ಅವರು ಹೇಳಿದ್ದಾರೆ.