ವಿಜಯಪುರ: ಇಲ್ಲಿಗೆ ಸಮೀಪದ ಯೋಗಾಪುರ ಗ್ರಾಮದಲ್ಲಿ ಹನುಮಾನ್ ಜಾತ್ರಾ ಮಹೋತ್ಸವದ ಅಂಗವಾಗಿ, ಭಾನುವಾರ ರಕ್ತದಾನ ಶಿಬಿರ ನಡೆಯಿತು. ಹಲವರು ರಕ್ತದಾನ ಮಾಡಿದರು.
ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಸದಾನಂದ ಎಸ್.ನಾಯಕ ಶಿಬಿರಕ್ಕೆ ಚಾಲನೆ ನೀಡಿ, ‘ದೇಹದಲ್ಲಿ ಮಾತ್ರ ರಕ್ತ ಉತ್ಪಾದನೆಯಾಗಲಿದೆ. ಕೃತಕ ತಯಾರಿ ಸಾಧ್ಯವಿಲ್ಲ. ಸ್ವಇಚ್ಚೆಯಿಂದ ರಕ್ತದಾನಕ್ಕೆ ಯುವ ಸಮೂಹ ಮುಂದಾಗಬೇಕು. ಇದರಿಂದ ಆರೋಗ್ಯವೂ ವೃದ್ಧಿಯಾಗಲಿದೆ’ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರರಾವ್ ಕಾನೂನು ಸೇವೆಗಳ ಕುರಿತು ಮಾಹಿತಿ ನೀಡಿದರೆ, ಗದಗದ ತೋಂಟದಾರ್ಯ ಮಠದ ಮಹಾಂತ ಸ್ವಾಮೀಜಿ ರೆಡ್ಕ್ರಾಸ್ ಸಂಸ್ಥೆ ಆರಂಭಗೊಂಡ ವಿವರಣೆ ನೀಡಿದರು. ಸರ್ಕಾರಿ ವಕೀಲ ಕೆ.ಕೆ.ಕುಲಕರ್ಣಿ ಮಾತನಾಡಿದರು.
ಒನ್ ಕಿಂಗ್ಸ್ ಬ್ಲಡ್ ಸೇವೆ ಸಂಘಟಕರಾದ ವಜೀದ ಪೀರಜಾದೆ, ಮಂಜುನಾಥ ಹೊನವಾಡ, ಸಂಗಮೇಶ ದಿಂಡವಾರ, ಸಂತೋಷ ಯಂಕಪ್ಪಗೋಳ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚನ್ನಬಸಪ್ಪ ಮರೆಗುದ್ದಿ, ಸಲೀಂ ನದಾಫ್, ಬಾಬುರಾವ ವಿ.ತಳವಾರ, ಡಾ.ವಿ.ಜಿ.ಪತ್ತಾರ, ಬಾಬು ಎಲ್.ಜಾಧವ, ಡಾ.ಮೋರೆ ಉಪಸ್ಥಿತರಿದ್ದರು.