ತಿರುಪತಿ: ‘ಚಂದ್ರಯಾನ–2’ರ ಸಿದ್ಧತೆಗಳೆಲ್ಲ ಪೂರ್ಣಗೊಂಡಿವೆ, ಸೋಮವಾರ ಬೆಳಗಿನ ಜಾವ 2.51ಕ್ಕೆ ಜಿಎಸ್ಎಲ್ವಿ ಎಂಕೆ3 ಬಾಹ್ಯಾಕಾಶಕ್ಕೆ ಹಾರಲಿದೆ’ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ಹೇಳಿದರು.
ಶನಿವಾರ ಇಲ್ಲಿನ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಪ್ರತಿನಿಧಿಗಳ ಜೊತೆ ಮಾತನಾಡಿದರು.
‘ಉಡಾವಣೆಯಾದ ಎರಡು ತಿಂಗಳ ಬಳಿಕ ನೌಕೆಯು ಚಂದ್ರನ ಮೇಲೆ ಇಳಿಯಲಿದೆ. ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಸರಳವಾಗಿರಬೇಕೆಂಬ ಉದ್ದೇಶದಿಂದ ನಾವು ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈ ಕಾರ್ಯಕ್ರಮದಿಂದ ಅಲ್ಲಿನ ವಾತಾವರಣದ ಬಗ್ಗೆ ನಮಗೆ ಅನೇಕ ಹೊಸ ವಿಚಾರಗಳು ತಿಳಿದುಬರಲಿವೆ’ ಎಂದು ಶಿವನ್ ಹೇಳಿದರು.
2008ರಲ್ಲಿ ‘ಚಂದ್ರಯಾನ–1’ ಯೋಜನೆಯನ್ನು ಇಸ್ರೊ ಯಶಸ್ವಿಯಾಗಿ ಕಾರ್ಯಗತಗೊಳಿಸಿತ್ತು.