ಬೆಂಗಳೂರು: ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಗ್ರೂಪ್ ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘವು ಸ್ವಾತಂತ್ರ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಸಂಘದ ಅಧ್ಯಕ್ಷ ಮುದ್ದುಕೃಷ್ಣ, ‘ರಾಜ್ಯದಲ್ಲಿ 10,450 ಗ್ರಾಮ ಸಹಾಯಕರು ಇದ್ದಾರೆ. ಅವರಿಗೆ ₹ 10,000 ಗೌರವಧನ ಹೊರತುಪಡಿಸಿ ಬೇರೆ ಸೌಲಭ್ಯವನ್ನು ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಿಮ್ಮನ್ನು ‘ಡಿ’ ದರ್ಜೆ ನೌಕರರನ್ನಾಗಿ ಕಾಯಂಗೊಳಿಸುತ್ತೇವೆ, ಚೆನ್ನಾಗಿ ಕೆಲಸ ಮಾಡಿ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬೆಳಗಾವಿ ಅಧಿವೇಶನದ ವೇಳೆ ಹೇಳಿದ್ದರು. ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈವರೆಗೂ ಬೇಡಿಕೆ ಈಡೇರಿಸಿಲ್ಲ ಎಂದು ದೂರಿದರು.
ಸ್ಥಳಕ್ಕೆ ಬಂದ ಕಾಗೋಡು ತಿಮ್ಮಪ್ಪ, ‘ಬೇಡಿಕೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡುವಂತೆಯೂ ಕೋರುತ್ತೇನೆ’ ಎಂದು ಹೇಳಿದರು.
ಅದಕ್ಕೆ ಒಪ್ಪದ ಪ್ರತಿಭಟನಾಕಾರರು, ‘ಪ್ರತಿ ಬಾರಿಯೂ ಭರವಸೆಯನ್ನಷ್ಟೇ ನೀಡುತ್ತಿದ್ದೀರಿ. ಆದರೆ ಈ ಬಾರಿ ನಿಮ್ಮ ಮಾತುಗಳನ್ನು ನಂಬಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.