ಹಾಸನ: ಕಂದಲಿಯ ಎನ್ಡಿಎಆರ್ಕೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಂಧನ ರಹಿತ ದ್ವಿಚಕ್ರ ವಾಹನ ಆವಿಷ್ಕರಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಮೆಕಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಮುಷಾದಿಕ್ ಪಾಷಾ, ಮಹಮ್ಮದ್ ರೂಹಾನ್, ಜಿ.ಆರ್.ಭವ್ಯ, ಆಯಿಷಾ ಆಫ್ರೇನ್ ಅವರು ಇಂಧನ ರಹಿತ ದ್ವಿಚಕ್ರ ವಾಹನ ವಿನ್ಯಾಸಗೊಳಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.
ಈ ವಾಹನಕ್ಕೆ ಟ್ರೆಡ್ ಮಿಲ್ನ ತಾಂತ್ರಿಕತೆ ಅಳವಡಿಸಲಾಗಿದ್ದು, ವಾಹನವು ಚಲಿಸುತ್ತಿರುವಾಗಲೇ ಸವಾರ ಅದರ ಮೇಲೆ ನಡೆಯುವುದರಿಂದ ವಿದ್ಯುತ್ ಶಕ್ತಿ ಉತ್ಪಾದನೆಯಾಗಿ ಬ್ಯಾಟರಿಯಲ್ಲಿ ಶೇಖರಣೆಗೊಳ್ಳುತ್ತದೆ. ಅದೇ ವಿದ್ಯುತ್ ಶಕ್ತಿಯಿಂದ ವಾಹನವನ್ನು ಪ್ರಾರಂಭಿಸಿ ಚಲಿಸಲು ಸಹಕಾರಿಯಾಗುತ್ತದೆ.
ಇದು ಮನುಷ್ಯನ ದಿನನಿತ್ಯದ ವ್ಯಾಯಾಮಕ್ಕೂ ಉಪಕಾರಿ. ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು. ಇದರ ತಯಾರಿಕಾ ವೆಚ್ಚ ಅಗ್ಗವಾಗಿರುವುದರಿಂದ ಜನ ಸಾಮಾನ್ಯರು ಕೈಗೆಟುವಕಂತಹ ಉಪಯುಕ್ತ ಸಲಕರಣೆ ಆಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ತಾಂತ್ರಿಕ ನಿರ್ದೇಶಕ ಡಾ.ಎಂ.ಜಿ.ವೆಂಕಟೇಶ್ ಮೂರ್ತಿ, ವಿಭಾಗದ ಮುಖ್ಯಸ್ಥ ಆರ್.ಜಿ.ಸಣ್ಣಮನಿ, ಉಪನ್ಯಾಸಕರಾದ ಕೆ.ಎಂ.ರಮೇಶ್, ಕುಲದೀಪಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.