ಹೆತ್ತೂರು: ಸುತ್ತ ಎತ್ತರದ ಬೆಟ್ಟ, ಕಣ್ಣು ಹಾಯಿಸಿದಷ್ಟೂ ಹಸಿರು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುವ ಜಲರಾಶಿ. ಹಾಲ್ನೊರೆ ತುಂಬಿ ಹರಿದಂತೆ ಭಾಸ ಮೂಡಿಸುವ ಜಲಸಿರಿ. ಹೆತ್ತೂರು ಹೋಬಳಿ ಕೇಂದ್ರದಿಂದ 12 ಕಿ.ಮೀ ಹಾಗೂ ಅತ್ತಿಹಳ್ಳಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಈ ಜಲಪಾತ ನಯನಮನೋಹರ.
ಹಾಡ್ಲಹಳ್ಳಿ, ಕಿರ್ಕಳ್ಳಿ, ಜೇಡಗದ್ದೆ, ಬಾಚನಹಳ್ಳಿ, ಮೂಕನಮನೆ ಗ್ರಾಮಗಳ ವ್ಯಾಪ್ತಿಯಲ್ಲಿ ಹರಿದು ಬರುವ ಮಳೆ ನೀರು ಮೂಕನಮನೆ ಸಮೀಪ ಒಂದುಗೂಡಿ ಜಲಪಾತವಾಗುತ್ತದೆ.
ನಂತರ ಹೊಂಗಡಹಳ್ಳ ನದಿಯಾಗಿ ನೀರು ಒಂದೆಡೆ ಹೋಗಿ ಸುಬ್ರಹ್ಮಣ್ಯದ ಕುಮಾರಪರ್ವತದ ಮುಖಾಂತರ ಮಂಗಳೂರಿನಲ್ಲಿ ಸಮುದ್ರ ಸೇರುತ್ತದೆ.
ಮಳೆಗಾಲದಲ್ಲಿ ಸುಮಾರು 60 ಅಡಿ ಅಗಲವಾಗಿ 80 ಅಡಿ ಎತ್ತರದಿಂದ ಧುಮಕುವ ಜಲಧಾರೆ ನೋಡುಗರಿಗೆ ಬೆಳ್ಮುಗಿಲ ಧಾರೆಯಾಗಿ ತೋರುತ್ತದೆ.
ಈ ಜಲರಾಶಿಯ ಸ್ಥಳಕ್ಕೆ ಕೊಂತನಮನೆಯಿಂದ ವಾಹನಗಳಲ್ಲಿ ಕ್ರಮಿಸಿದರೂ ಸ್ವಲ್ಪ ಹಾದಿ ಮಾತ್ರ ಕೊರಕಲು ಕಲ್ಲು, ಅಂಕು ಡೊಂಕು, ತಗ್ಗು ದಿಣ್ಣೆಗಳಿಂದ ಕೂಡಿದೆ.
ಮೂಕನಮನೆ ಜಲಪಾತದ ಅರಿವು ಬಗ್ಗೆ ತಾಲೂಕಿನಲ್ಲಿಯೇ ಹೆಚ್ಚು ಪ್ರಚಲಿತವಾಗಿಲ್ಲ. ಜಲಪಾತದ ಸಮೀಪ ಯಾವುದೇ ಸೌಕರ್ಯವಿಲ್ಲ. ಕಿಡಿಗೇಡಿಗಳ ಹಾವಳಿ ವಿಪರೀತವಾಗಿದೆ ಎಂಬುವುದು ಸ್ಥಳೀಯರ ವಿವರಣೆ.
ಜಲಪಾತದಲ್ಲಿ ನೀರಿನಮಟ್ಟ ಹೆಚ್ಚು ಇದ್ದರೂ ಮದ್ಯಪಾನ ಮಾಡಿ ನೀರಿಗೆ ಜಿಗಿಯುವ ಕಿಡಿಗೇಡಿಗಳ ಹಾವಳಿ ವಿಪರೀತ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ
– ಸೂರಜ್, ಸ್ಥಳೀಯ