ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ರುಚಿ ಉಣಿಸುವ ನಲ್ಲಿಕಾಯಿ

ವೆಬ್ ಡಿಸೈನರ್‍ನ ಕನ್ನಡ ಪ್ರೀತಿ
Last Updated 25 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ನೆಲ್ಲಿಕಾಯಿ’ ಎಂದೊಡನೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಅದರ ಹುಳಿ, ವಗರು ರುಚಿ ಎಲ್ಲರಿಗೂ ಇಷ್ಟ. ಅದರ ಜತೆ ಒಂಚೂರು ಉಪ್ಪು, ಖಾರ, ಸಿಹಿ ಸೇರಿಸಿದರಂತೂ ಅದರ ರುಚಿಗೆ ಮರುಳಾಗದವರೇ ಇಲ್ಲ. ಈಗ ಏಕೆ ಈ ನೆಲ್ಲಿಕಾಯಿ ನೆನಪು ಎನ್ನುತ್ತೀರಾ?

ಈಗ ನಾನಿಲ್ಲಿ ಹೇಳ ಹೊರಟಿರುವುದು ತಿನ್ನುವ ನೆಲ್ಲಿಕಾಯಿ ಬಗ್ಗೆ ಅಲ್ಲ. ಕೇಳುವ ‘ನಲ್ಲಿಕಾಯಿ’ ಬಗ್ಗೆ. ಆಶ್ಚರ್ಯವಾಯಿತಲ್ಲವಾ? ಅಚ್ಚರಿ ಪಡಬೇಡಿ. ಇಲ್ಲಿ ನಲ್ಲಿಕಾಯಿ ಎಂದರೆ, ತಿನ್ನುವುದಲ್ಲ, ಕೇಳುವುದು;

‘ನಲ್ಲಿಕಾಯಿ’ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪೋಡ್‍ಕಾಸ್ಟ್‌ಗಳನ್ನು ಒಳಗೊಂಡ ಒಂದು ವೆಬ್‍ಸೈಟ್. ಇಲ್ಲಿ ವೈವಿಧ್ಯಮಯ ವಿಚಾರಗಳು ಆಡಿಯೊ ರೂಪದಲ್ಲಿವೆ. ಇಲ್ಲಿನ ವಿಚಾರಗಳನ್ನು ಓದಿ ತಿಳಿಯುವಂತಿಲ್ಲ. ಬದಲಾಗಿ ಕೇಳಿ ತಿಳಿದುಕೊಳ್ಳುವ ಹಾಗೆ ವೆಬ್‍ಸೈಟ್ ಡಿಸೈನ್ ಮಾಡಲಾಗಿದೆ.

ನಲ್ಲಿಕಾಯಿ ಸಂಪೂರ್ಣವಾಗಿ ಕನ್ನಡ ಸಾಹಿತ್ಯಕ್ಕೆ ಮೀಸಲಾದ ಜಾಲತಾಣ. ನೆಲ್ಲಿಕಾಯಿಗೆ ಉಪ್ಪು, ಖಾರ ಸೇರಿದರೆ ಹೇಗೆ ರುಚಿ ಬದಲಾಗುವುದೋ ಹಾಗೆ ಸಾಹಿತ್ಯಕ್ಕೆ ಕಥೆ, ಕವನ, ಕಾದಂಬರಿ, ನಾಟಕ, ವಿವಿಧ ಪ್ರಕಾರಗಳ ಓದು ಸಾಹಿತ್ಯಾಭಿಮಾನಿಗಳಿಗೆ ರುಚಿಸುತ್ತದೆ. ಇದನ್ನು ಅರಿತ ‘ನಲ್ಲಿಕಾಯಿ’ ಸ್ಥಾಪಕ, ಈ ಜಾಲತಾಣದಲ್ಲಿ ಕಥೆ, ಕವನ, ಪುಸ್ತಕ ವಿಮರ್ಶೆ, ವಿಚಾರಗಳು ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ಆಡಿಯೊ ರೂಪದಲ್ಲಿ ಕೇಳಿಸುವ ಪ್ರಯತ್ನ ಮಾಡಿದ್ದಾರೆ.

ಜಾಲತಾಣದ ರೂವಾರಿ

ಈ ಜಾಲತಾಣದ ರೂವಾರಿ ಶರತ್. ಕಾಫಿನಾಡು ಚಿಕ್ಕಮಗಳೂರಿನ ಕೊಪ್ಪದವರು. ಸದ್ಯ ಬೆಂಗಳೂರಿನ ‘ವೆಬ್‍ಜೇಡ’ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಸೀನಿಯರ್ ವೆಬ್‌ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಇಂದಿನ ಧಾವಂತ ಜೀವನದಲ್ಲಿ ಪುಸ್ತಕ, ಪತ್ರಿಕೆ ಓದಿ ವಿಚಾರಗಳನ್ನು ತಿಳಿಯಲು ಯಾರಿಗೂ ಪುರುಸೊತ್ತಿಲ್ಲ. ವಿಚಾರಗಳನ್ನು ತಿಳಿಯುವ ಹಪಹಪಿ ಇರುವ ಮನಸ್ಸುಗಳಿಗೆ ಶಬ್ದಗಳ ಮೂಲಕ ವಿಚಾರಗಳನ್ನು ರವಾನಿಸುವ ಉದ್ದೇಶದಿಂದ ಈ ಪೋಡ್‍ಕಾಸ್ಟ್ ವೆಬ್‍ಸೈಟ್ ರೂಪಿಸಲಾಗಿದೆ’ ಎನ್ನುತ್ತಾರೆ ಶರತ್. ಬೇರೆ ಬೇರೆ ಭಾಷೆಗಳ ಪೋಡ್‍ಕಾಸ್ಟ್ ವೆಬ್‍ಸೈಟ್‍ಗಳು ಸಾಕಷ್ಟು ಇರುವಾಗ ಕನ್ನಡದಲ್ಲಿ ಇದರ ಕೊರತೆ ಇರುವುದನ್ನು ಗಮನಿಸಿದ ಶರತ್ ಈ ಸಾಹಸ ಮಾಡಿದ್ದಾರೆ.

‘ಬಾಲ್ಯದಿಂದಲೂ ಪೋಷಕರು, ಶಿಕ್ಷಕರಿಂದ ಕನ್ನಡದ ಪದ್ಯ, ಕಥೆ, ಕವಿತೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಇವುಗಳು ಪದೇ ಪದೇ ನೆನಪಾಗಿ ಕಿವಿಯಲ್ಲಿ ಗುಂಯ್ಯಗುಡುತ್ತಿದ್ದವು. ಆದರೆ ಈಗ ಇಂತಹ ಕಥೆ. ಹಾಡು ಹೇಳುವ ಪೋಷಕರು ವಿರಳ. ಪದ್ಯಗಳನ್ನು ರಾಗವಾಗಿ ಹಾಡುವ ಗುರಗಳ ಕೊರತೆಯೂ ಇದೆ. ಇದೂ ಕೂಡ ನಲ್ಲಿಕಾಯಿ ಆರಂಭಕ್ಕೆ ಕಾರಣ’ ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ವೆಬ್‌ಸೈಟ್‌ ಮಾಡಿದ ಹಿಂದಿನ ಕಥೆ ಹೇಳುತ್ತಾರೆ ಶರತ್. ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ರಸಾನುಭವವನ್ನು ಪೋಡ್‍ಕಾಸ್ಟ್ ಮೂಲಕ ಕೇಳಿಸುವ ಆಸೆ ಶರತ್ ಅವರದ್ದು.

ಆಂಗ್ಲ ಮಾಧ್ಯಮದಲ್ಲಿ ಓದಿದರೂ ಕನ್ನಡ ಉಳಿಸುವ, ಬೆಳೆಸುವ ಕಾಯಕದಲ್ಲಿ ಸ್ವಯಂ ಸೇವಕನಂತೆ ತೊಡಗಿಸಿಕೊಂಡಿರುವ ಶರತ್ ಅವರ ಕಾರ್ಯ ಶ್ಲಾಘನೀಯ.

ನಿಮ್ಮ ರುಚಿಯೂ ಇರಲಿ

ಸೆಪ್ಟೆಂಬರ್ 2015ರಲ್ಲಿ ಪ್ರಾರಂಭವಾದ ‘ನಲ್ಲಿಕಾಯಿ’ಯಲ್ಲಿ ಅನೇಕ ಆಡಿಯೊ ವಿಚಾರಗಳಿವೆ. ಕೇಳುಗರ ಶ್ರವಣ ಮತ್ತು ಮೆದುಳಿಗೆ ಆಪ್ಯಾಯಮಾನ ಅನುಭವ ನೀಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಆಡಿಯೊ ವ್ಯವಸ್ಥೆ ಮಾಡಲಾಗಿದೆ.

‘ಕನ್ನಡ ಸಾಹಿತ್ಯ ಬೆಳೆಸುವ ಉಳಿಸುವ ಮಹತ್ಕಾರ್ಯದಲ್ಲಿ ನಿಮ್ಮ ಪಾಲೂ ಇರಲಿ’ ಎಂಬುದು ಶರತ್ ಅವರ ಮನವಿ. ಅದಕ್ಕಾಗಿ ನಿಮ್ಮದೇ ಕಥೆ, ಕವನ, ನೀವು ಓದಿದ ಪುಸ್ತಕ, ವಿಚಾರಗಳು, ದಿನಾಚರಣೆಗಳ ಮಹತ್ವ, ಇತ್ಯಾದಿಗಳನ್ನು ನಿಮ್ಮ ಮೊಬೈಲ್‍ನಲ್ಲಿ ರೆಕಾರ್ಡ್‌ ಮಾಡಿ, ಧ್ವನಿಮುದ್ರಿಸಿ ಕಳಿಸಿದರೆ ಅದನ್ನು ನಲ್ಲಿಕಾಯಿಯಲ್ಲಿ ಪ್ರಕಟಿಸುತ್ತಾರೆ. ಆ ಮೂಲಕ ನೀವೂ ನಲ್ಲಿಕಾಯಿಗೆ ರುಚಿ ಸೇರಿಸಬಹುದು. ವಿವರಗಳಿಗೆ 8904475972 ಸಂಪರ್ಕಿಸಿ. ನಲ್ಲಿಕಾಯಿಯ ಸಾಹಿತ್ಯ ರುಚಿ ಸವಿಯಲು https://nallikayi.com ಗೆ ಭೇಟಿಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT