ಧರ್ಮಪುರಿ: ಕಾಡಿನ ರಸ್ತೆ ದಾಟಲು ನಿಂತಿದ್ದ ಕಾಡಾನೆಯೊಂದಕ್ಕೆ ತೊಂದರೆ ಕೊಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.
ಮದ್ಯಪಾನ ಮಾಡಿದ್ದ ವ್ಯಕ್ತಿ ವಾಹನ ಇಳಿದು ರಸ್ತೆ ದಾಟುತ್ತಿದ್ದ ಆನೆಯ ಬಳಿ ಹೋಗಿ ಅದನ್ನು ಪ್ರಚೋದಿಸಲು ನೋಡಿದ್ದಾನೆ. ಬಳಿಕ ಅದಕ್ಕೆ ಕೈ ಮುಗಿಯುವುದು ಮತ್ತಿತರ ಹಾವಭಾವಗಳನ್ನು ಪ್ರದರ್ಶಿಸಿದ್ದಾನೆ. ಈ ವೇಳೆ ಆನೆ ಆತನಿಗೆ ಏನೂ ಮಾಡದೇ ರಸ್ತೆ ದಾಟುವುದಕ್ಕಾಗಿ ಕಾಯುತ್ತಿತ್ತು. ಈ ಕುರಿತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ವಿಡಿಯೊ ಪರಿಶೀಲಿಸಿ ಇದೀಗ ಕ್ರಮ ಕೈಗೊಂಡಿರುವ ಧರ್ಮಪುರಿ ಜಿಲ್ಲೆಯ ಡಿಎಫ್ಒ ಅವರು ಕೆ ಮುರುಘನ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದಾರೆ.
ಕಾಡು ಪ್ರಾಣಿಗೆ ತೊಂದರೆ ಕೊಟ್ಟ ಆರೋಪದ ಮೇಲೆ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದು ಆತನ ನಡೆಗೆ ಸಾಮಾಜಿಕ ತಾಣಗಳಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಮೇ 11 ರಂದು ಘಟನೆ ನಡೆದಿತ್ತು. ಈ ಕುರಿತು ದಿ ಹಿಂದೂ ವೆಬ್ಸೈಟ್ ವರದಿ ಮಾಡಿದೆ.