ಮೃದಂಗ ದಿಗ್ಗಜ ವಿದ್ವಾನ್ ಎ.ವಿ.ಆನಂದ್ ಅವರಿಗೆ ಈಗ 85 ವರ್ಷ ವಯಸ್ಸು. ಐದು ತಲೆಮಾರುಗಳ ಕಲಾವಿದರಿಗೆ ಮೃದಂಗ ನುಡಿಸಿದ ಅವರ ಹಾದಿಯಲ್ಲಿ ಹಲವು ಅಚ್ಚರಿಗಳಿವೆ. 9ನೇ ವಯಸ್ಸಿನಿಂದ ಮೃದಂಗ ನುಡಿಸುತ್ತಿರುವ ಅವರು ದೇಶದ ನೂರಾರು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರ ಗಾಯನಕ್ಕೆ, ವಾದ್ಯ ವೈಭವಕ್ಕೆ ಮೃದಂಗ ಸಾಥಿಯಾಗಿದ್ಧಾರೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜುಗಲ್ಬಂದಿಗಳಿಗೂ ಜೊತೆಯಾಗಿದ್ದಾರೆ. 40ರ ದಶಕದಿಂದ ಮೃದಂಗ ನುಡಿಸುತ್ತಿರುವ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ತಾಳವಾದ್ಯ ವಿನ್ಯಾಸಕನಾಗಿ ಹಲವು ಆಶ್ಚರ್ಯ ಸೃಷ್ಟಿಸಿದ್ದಾರೆ. ನೂರಾರು ತೀರ್ಮಾನ, ಮುಕ್ತಾಯಗಳನ್ನು ಸೃಷ್ಟಿಸಿ ತಮ್ಮದೇ ಆದ ಶೈಲಿಯನ್ನು ಕೊಡುಗೆಯಾಗಿ ನೀಡಿದ್ಧಾರೆ.
ತಾಳವಾದ್ಯ ಕುರಿತಂತೆ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಹಲವು ದೇಶಗಳಲ್ಲಿ ಪ್ರವಾಸ ಮಾಡಿ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಪಠ್ಯಪುಸ್ತಕ ಸಮಿತಿಯಲ್ಲಿದ್ದ ಅವರು ವಿದ್ವಾಂಸರ ಜೊತೆ ತಾಳವಾದ್ಯ ಪಠ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ಧಾರೆ.
1947ರಲ್ಲಿ ಮೈಸೂರು ಟಿ ಚೌಡಯ್ಯ ಅವರ ವೈಲಿನ್ ಕಛೇರಿಗೆ ಮೃದಂಗ ನುಡಿಸುವ ಮೂಲಕ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ವಿದ್ವಾನ್ ಎ.ವಿ.ಆನಂದ್ ಅವರು ಹಿಂದೆ ತಿರುಗಿ ನೋಡಿಲ್ಲ. ಅವರ ಮೃದಂಗ ಪಯಣದ ಮೇಲೆ ಈ ವಾರದ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿ ಬೆಳಕು ಚೆಲ್ಲಲಾಗಿದೆ.