ಉತ್ತರ ಕನ್ನಡದ ಕುಮಟಾ ತಾಲ್ಲೂಕಿನ ಮಾಣಿಕಟ್ಟಾ ಗಜನಿಯಲ್ಲಿ ಬೆಳೆಯುವ ವಿಶಿಷ್ಟ ಭತ್ತ ಈ ಕಗ್ಗ, ಇಡೀ ರಾಜ್ಯದಲ್ಲೇ ಅಪರೂಪದ ತಳಿ. ಪಾರಂಪರಿಕ ಮೌಲ್ಯ ಹೊಂದಿರುವ ಈ ಭತ್ತದ ಸಸಿಗಳು, ಪ್ರವಾಹದಲ್ಲಿಯೂ ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಹೇರಳ ಪೌಷ್ಟಿಕಾಂಶ ಹೊಂದಿದ್ದು, ಊಟಕ್ಕೆ ಮತ್ತು ಅವಲಕ್ಕಿಗೆ ರುಚಿಯಾದ ಭತ್ತವಿದು. ಇದಕ್ಕೀಗ ನೀರು ಕಾಗೆಗಳು ಹಾಗೂ ಕಾಂಡ್ಲಾ ಗಿಡದಿಂದ ಸಂಚಕಾರ ಉಂಟಾಗಿದೆ. ಈ ವಿಶಿಷ್ಟ ತಳಿಯ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಬೇಕು ಎಂದು ಒತ್ತಾಯಿಸುತ್ತಾರೆ ರೈತರು.