ಯಾದಗಿರಿ: ಸುರಪುರ ತಾಲ್ಲೂಕಿನ ಹೆಗ್ಗನದೊಡ್ಡಿ ಗ್ರಾಮಸ್ಥರು ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶುಕ್ರವಾರ ಇಬ್ಬರು ಹೆಣ್ಣುಮಕ್ಕಳಿಗೆ ಕಲ್ಪಿತ ವಿವಾಹ ಮಾಡಿಸಿ, ಸಸಿ ಆಡುವ ಹಬ್ಬ ಆಚರಿಸಿದರು. ದೊಡ್ಡವರಿಗೆ ವಿವಾಹ ಮಾಡುವಂತೆಯೇ ಶಾಸ್ತ್ರೋಕ್ತವಾಗಿ ನಿಯಮಗಳನ್ನು ಪಾಲಿಸಿದರು.
ಕಾರ ಹುಣ್ಣಿಮೆ ರೈತರ ಹಬ್ಬವಾಗಿದೆ. ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ನಡೆಸುವುದು ಸಂಪ್ರದಾಯ. ಆದರೆ, ಹೆಗ್ಗನದೊಡ್ಡಿ ಗ್ರಾಮದಲ್ಲಿ ಹುಣ್ಣಿಮೆಯ ಮರುದಿನ ಮಕ್ಕಳು ಸಸಿ ಹಬ್ಬ ಆಚರಿಸುವುದು ವಿಶೇಷವಾಗಿದೆ.
ವಧು-ವರರು ಸಸಿಗಳನ್ನು ನೆಟ್ಟರೆ ಒಳ್ಳೆಯ ಮಳೆ, ಬೆಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.