ಹುಬ್ಬಳ್ಳಿಯ ಬಿಡನಾಳದಲ್ಲಿ ಒಂದೇ ಪೆಂಡಾಲ್ನಲ್ಲಿ ಒಂದೆಡೆ ‘ಗಣೇಶ’ ಮೂರ್ತಿ ಪ್ರತಿಷ್ಠಾಪನೆ, ಇನ್ನೊಂದೆಡೆ ‘ಪಂಜಾ’ ಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಿಂದೂ, ಮುಸ್ಲಿಮರೆಲ್ಲರೂ ಸೇರಿ ಭಕ್ತಿಯಿಂದ ಎರಡೂ ಕಡೆ ಪೂಜೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಸೌಹಾರ್ದ, ಭಾವೈಕ್ಯ ಮೆರೆದಿದ್ದಾರೆ.
33 ವರ್ಷಗಳಿಗೊಮ್ಮೆ ಗಣೇಶ ಚತುರ್ಥಿ ಹಾಗೂ ಮೊಹರಂ ಒಂದೇ ಬಾರಿಗೆ ಬರುತ್ತವೆ. 2018 ರಿಂದ 2020ರವರೆಗೆ ಒಂದೇ ಬಾರಿಗೆ ಹಬ್ಬ ಬಣದಿವೆ. ಮತ್ತೆ 33 ವರ್ಷಗಳ ನಂತರ ಒಂದೇ ಬಾರಿಗೆ ಬರುತ್ತವೆ. ಬಿಡನಾಳ ಗ್ರಾಮದವರೆಲ್ಲರೂ ಸೇರಿ ಗಣೇಶ ಹಾಗೂ ಪಂಜಾ ಪ್ರತಿಷ್ಠಾಪಿಸಿದ್ದಾರೆ. ಗ್ರಾಮದ ಜನರು ಗಣೇಶನಿಗೆ ನೈವೇದ್ಯ ಎಡೆ ಹಿಡಿದರೆ, ಪಂಜಾಗಳಿಗೆ ಸಕ್ಕರೆ ಊದಿಸುವ ಮೂಲಕ ಭಕ್ತಿಯ ನಮನ ಸಲ್ಲಿಸುತ್ತಿದ್ದಾರೆ.