ಹಲವು ವರ್ಷಗಳಿಂದ ಕೇರಳ ರಾಜಕಾರಣದಲ್ಲಿ ಎರಡು ಮೈತ್ರಿಕೂಟಗಳದ್ದೇ ಪ್ರಾಬಲ್ಯ. ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತಾರೂಢ ಮೈತ್ರಿಕೂಟ ಬದಲಾಗುತ್ತದೆ ಎಂಬುದು ರೂಢಿಯೇ ಆಗಿಬಿಟ್ಟಿದೆ. ಈಗ, ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಎಲ್ಡಿಎಫ್ ಸರ್ಕಾರ ಇದೆ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಅಥವಾ ಯುಡಿಎಫ್ ಅಧಿಕಾರ ಕಸಿದುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ದೇವರ ನಾಡಿನಲ್ಲಿ ನೆಲೆಯೂರಲು ಬಿಜೆಪಿ ಹರಸಾಹಸ ಪಡುತ್ತಿದೆ. ಹಾಗಾಗಿ, ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದೆಯೇ? ಈ ಬಾರಿಯೂ ಮೈತ್ರಿಕೂಟಗಳ ಪರ್ಯಾಯ ಆಡಳಿತವೇ ಮರುಕಳಿಸಲಿದೆಯೇ? ಅಥವಾ ಸಿಪಿಎಂನ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿರುವ ವಿಚಾರಗಳು.