ಭುವನೇಶ್ವರ: ತೌತೆ ಬಳಿಕ ಯಸ್ ಚಂಡಮಾರುತದ ಭೀತಿ ಶುರುವಾಗಿದೆ. ನಾಳೆ ಒಡಿಶಾದ ಬಾಲಸೋರ್ನಲ್ಲಿ ಯಸ್ ಚಂಡಮಾರುತವು ಧರೆಗಪ್ಪಿಳಿಸುವ ಸಾಧ್ಯತೆ ಇದ್ದು, ಈಗಾಗಲೇ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ..ಮುಂದಿನ 12 ಗಂಟೆಗಳಲ್ಲಿ ಯಸ್ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಹೀಗಾಗಿ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಲಕ್ಷಾಂತರ ಮಂದಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.ಒಡಿಶಾದ ಬಾಲಸೂರ್ ಜಿಲ್ಲೆಯಲ್ಲಿ ಅತಿ ಹೆಚ್ಚು 74,132 ಮಂದಿಯನ್ನು, ನಂತರ ಭದ್ರಕ್ ಜಿಲ್ಲೆಯಲ್ಲಿ 73,103 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಯಸ್ ಚಂಡಮಾರುತವು ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಧಾಮರಾ ಬಂದರಿಗೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.