ನಾಯಕನಿಗಿಂತ, ಒಂದು ಸಿದ್ಧಾಂತದ ಮೂಲಕ, ಅದರಲ್ಲಿಯೂ ಹಿಂದುತ್ವ ವಿಚಾರಧಾರೆಯನ್ನು ಮುನ್ನೆಲೆಗೆ ತರುವ ಮೂಲಕ ಒಂದು ವೋಟ್ಬ್ಯಾಂಕ್ ಸೃಷ್ಟಿಸಬೇಕು ಎಂಬ ಉದ್ದೇಶದಿಂದಲೇ ಯಡಿಯೂರಪ್ಪ ಅವರ ಬದಲಿಗೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು ಎಂಬ ಮಾತುಗಳೂ ಇವೆ. ರಾಜ್ಯದಲ್ಲಿನ ಈ ಕೋಮು ಗಲಾಟೆಗಳು ಆಕಸ್ಮಿಕವೂ ಅಲ್ಲ, ಇವೆಲ್ಲ ಉದ್ದೇಶಪೂರ್ವಕ ಮತ್ತು 2024ರ ಲೋಕಸಭಾ ಚುನಾವಣೆಯ ಪ್ರಚಾರದ ವಿಷಯವೂ ಆಗಿರಬಹುದು ಎಂಬ ಸೂಚನೆಯೂ ಸಿಗತೊಡಗಿದೆ. ಚುನಾವಣೆ ಹತ್ತಿರವಾದಂತೆ ಈ ಘಟನೆಗಳೂ ಇನ್ನೂ ಹೆಚ್ಚುತ್ತವೆ ಎಂಬುದು ರಾಜಕೀಯ ವಿಶ್ಲೇಷಕರು ಮತ್ತು ಪ್ರಜ್ಞಾವಂತ ನಾಗರಿಕರ ಅರಿವು ಮತ್ತು ಆತಂಕ.