ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಮಹಾಶಿವರಾತ್ರಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಎರಡು ದಿನಗಳಿಂದ ಕಾವೇರಿ ನದಿ ಮೂಲಕ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ರಾಮನಗರ, ಕನಕಪುರ, ಹಲಗೂರು, ಮಳವಳ್ಳಿ, ಮಂಡ್ಯ ಸೇರಿದಂತೆ ಹಲವು ಊರುಗಳಿಂದ ಕಾವೇರಿಯ ಸಂಗಮ ದಾಟಿ ಬರುತ್ತಿದ್ದಾರೆ. ವಯಸ್ಸಿನ ಹಂಗಿಲ್ಲದೆ ಬರಿಗಾಲಿನಲ್ಲಿ ಕಾಡುಮೇಡುಗಳನ್ನ ದಾಟಿ, ನೂರೂರು ಕಿಲೋಮೀಟರ್ ದೂರದಿಂದ ಬರುತ್ತಿರುವ ಭಕ್ತರು ಶುಕ್ರವಾರದ ವೇಳೆಗೆ ಪಾದಯಾತ್ರೆ ಮೂಲಕ ಬೆಟ್ಟ ತಲುಪಿ ಮಾದಪ್ಪನ ದರ್ಶನ ಪಡೆದು ಹರಕೆ ಕಾಣಿಕೆ ಸಲ್ಲಿಸಲಿದ್ದಾರೆ. 21ರಿಂದ 24ರವರೆಗೆ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ನಡೆಯಲಿದೆ.