ಢಾಕ:ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಅಪ್ಪಳಿಸಿದ ಸಿತ್ರಾಂಗ್ ಚಂಡಮಾರುತದ ಅಬ್ಬರಕ್ಕೆ ಮೂವರು ಮಕ್ಕಳು ಸೇರಿ ಕನಿಷ್ಠ 18 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕೊಮಿಲ್ಲಾದಲ್ಲಿ ಮರವೊಂದು ಮನೆಯ ಮೇಲೆ ಉರುಳಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಭೋಲ ಜಿಲ್ಲೆಯಲ್ಲಿ ಮರದ ಅಡಿಯಲ್ಲಿ ಸಿಲುಕಿ ನಾಲ್ವರು ಸತ್ತಿದ್ದಾರೆ. ಚಿತ್ತಗಾಂಗ್ ಜಿಲ್ಲೆಯಲ್ಲಿ ಮಗುವೊಂದರ ಮೃತದೇಹ ಪತ್ತೆಯಾಗಿದೆ. ಸಿರಾಜ್ಗಂಜ್ ಜಿಲ್ಲೆಯ ಯಮುನಾ ನದಿಯಲ್ಲಿ ಬೋಟ್ ಮುಳುಗಿ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಢಾಕದಲ್ಲಿ ಬಹುಮಹಡಿಯ ಕಟ್ಟಡ ಕುಸಿದು ಒಬ್ಬ ವ್ಯಕ್ತಿ ಸತ್ತಿದ್ದಾರೆ, ಗೋಪಾಲ್ಗಂಜ್ ಜಿಲ್ಲೆಯಲ್ಲಿ ಮರ ಉರುಳಿ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಚಂಡಮಾರುತದಿಂದ ದೇಶದಾದ್ಯಂತ 10,000 ಮನೆಗಳು,6000 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿವೆ ಎಂದು ವಿಪತ್ತು ನಿರ್ವಹಣೆ ರಾಜ್ಯ ಸಚಿವ ಎನಾಮುರ್ ರಹ್ಮಾನ್ ತಿಳಿಸಿದ್ದಾರೆ.