ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ದಟ್ಟ ಹೊಗೆ ಆವರಿಸಿದ ಪರಿಣಾಮವಾಗಿ ಕಾರ್ಮಿಕರು, ರಕ್ಷಣಾ ತಂಡದ 6 ಸಿಬ್ಬಂದಿ ಸೇರಿ ಒಟ್ಟು 52 ಜನ ಮೃತಪಟ್ಟಿದ್ದಾರೆ.
ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ ದುರಂತ ಇದಾಗಿದೆ ಎಂದು ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ ಮಾಡಿದೆ.
ಲಿಸ್ಟ್ವ್ಯಾಜ್ನ್ಯಾಯ ಗಣಿ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಮತ್ತೊಂದು ಸುದ್ದಿ ಸಂಸ್ಥೆ ‘ಟಿಎಎಸ್ಎಸ್’ ವರದಿ ಮಾಡಿದೆ. ಮೃತದೇಹಗಳು ಗಣಿಯ ಆಳದಲ್ಲಿದ್ದು, ತಾಪಮಾನ ಮತ್ತು ಮೀಥೇನ್ ಸಾಂದ್ರತೆ ಕಡಿಮೆಯಾದ ನಂತರವೇ ಅವುಗಳನ್ನು ಮೇಲಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ.
ಕಲ್ಲಿದ್ದಲು ಗಣಿಯ 250 ಮೀಟರ್ ಆಳದ ವರೆಗೆ ಹೊಗೆ ಆವರಿಸಿದ ಪರಿಣಾಮ 11 ಗಣಿ ಕಾರ್ಮಿಕರು ಮೃತಪಟ್ಟಿರುವುದಾಗಿ ಈ ಮೊದಲು ವರದಿಯಾಗಿತ್ತು. ಅಂತಿಮವಾಗಿ 52 ಮಂದಿ ಮೃತಪಟ್ಟಿರುವುದಾಗಿ ಖಚಿತವಾಗಿದೆ.
ಸುರಕ್ಷತಾ ಕ್ರಮಗಳ ಉಲ್ಲಂಘನೆ ಆರೋಪದಲ್ಲಿ ಗಣಿಯ ಹಿರಿಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಗಣಿ ದುರಂತಕ್ಕೆ ರಷ್ಯಾ ಆಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದುರಂತ ನಡೆದ ಕೆಮೆರೊವೊ ಪ್ರದೇಶದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.