ಢಾಕಾ: ಬಾಂಗ್ಲಾದೇಶಕ್ಕೆಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಗೆ ಬುಧವಾರ ಇಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಏರ್ ಇಂಡಿಯಾದ ವಿಶೇಷ ವಿಮಾನದ ಮೂಲಕ ಇಲ್ಲಿನ ಹಜರತ್ ಶಾಜಲಾಲ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ರಾಷ್ಟ್ರಪತಿ ಕೋವಿಂದ್, ಪತ್ನಿ ಸವಿತಾ ಕೋವಿಂದ್ ಹಾಗೂ ಪುತ್ರಿ ಸ್ವಾತಿ ಅವರಿಗೆ, ಬಾಂಗ್ಲಾದೇಶ ಅಧ್ಯಕ್ಷ ಎಂ.ಅಬ್ದುಲ್ ಹಮೀದ್ ಹಾಗೂ ಪತ್ನಿ ರಶೀದಾ ಖಾನಮ್ ದಂಪತಿ ಸ್ವಾಗತ ಕೋರಿದರು.
ರಾಷ್ಟ್ರಪತಿಗಳೊಂದಿಗೆ ಉನ್ನತ ಅಧಿಕಾರಿಗಳ ನಿಯೋಗವೂ ತೆರಳಿದೆ.
1971ರಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯಿತು. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ರಾಷ್ಟ್ರಪತಿ ಕೋವಿಂದ ಅವರು ಇಲ್ಲಿಗೆ ಆಗಮಿಸಿದ್ದಾರೆ.
‘ಪ್ರವಾಸದ ವೇಳೆ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗೆ ಸಂಬಂಧಿಸಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಾಂಗ್ಲಾದೇಶಕ್ಕೆ ರಾಷ್ಟ್ರಪತಿಗಳ ಭೇಟಿ ಉಭಯ ದೇಶಗಳ ಬಾಂಧವ್ಯದ ಭವ್ಯ ಆರಂಭ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.