ಕಠ್ಮಂಡು: ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ತಾರಾ ಏರ್ ಸಂಸ್ಥೆಯ ವಿಮಾನಭಾನುವಾರ ಪತನವಾಗಿ 22 ಮಂದಿ ಮೃತಪಟ್ಟಿದ್ದರು. ಇದೇವೇಳೆ ಪ್ರಾಣ ಕಳೆದುಕೊಂಡಿದ್ದ ನಾಲ್ವರು ಭಾರತೀಯರ ಅಂತ್ಯಕ್ರಿಯೆಯನ್ನು ಇಲ್ಲಿನ ಪವಿತ್ರ ಪಶುಪತಿನಾಥ ದೇವಾಲಯದಸಮೀಪ ಗುರುವಾರ ನೆರವೇರಿಸಲಾಗಿದೆ.
ಕೆನಡಾದ 'ಡಿ ಹ್ಯಾವಿಲ್ಯಾಂಡ್' ನಿರ್ಮಿತ ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಜರ್ಮನಿಯ ಇಬ್ಬರು, 13 ಮಂದಿ ನೇಪಾಳಿಗರು ಹಾಗೂ ಮೂವರು ಸಿಬ್ಬಂದಿ ಸೇರಿ 22 ಜನರು ಪೋಖರಾ ನಗರದಿಂದ ಮಧ್ಯ ನೇಪಾಳದ ಪ್ರಸಿದ್ಧ ಚಾರಣ ತಾಣ ಜೋಮ್ಸಮ್ಗೆ ಪಯಣಿಸುತ್ತಿದ್ದರು.
ಉದ್ಯಮಿಯಾದ ಅಶೋಕ್ ಕುಮಾರ್ ತ್ರಿಪಾಠಿ (54) ಹಾಗೂ ಅವರಿಂದ ವಿಚ್ಛೇದನ ಪಡೆದಿದ್ದ ವೈಭವಿ ಬಂದೇಕರ್ ತ್ರಿಪಾಠಿ (51) ಅವರು ತಮ್ಮ ಮಕ್ಕಳಾದ ಧನುಷ್ (22), ರಿತಿಕಾ (15) ಅವರೊಂದಿಗೆ ರಜೆ ಕಳೆಯುವುದ್ಕಾಗಿ ನೇಪಾಳಕ್ಕೆ ಆಗಮಿಸಿದ್ದರು.
ತ್ರಿಭುವನ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ನಂತರನಾಲ್ವರ ಅಂತ್ಯಕ್ರಿಯೆಯನ್ನುಪಶುಪತಿನಾಥ ದೇವಾಲಯದ ಬಳಿ ಇರುವ ವಿದ್ಯುತ್ ಚಿತಾಗರದಲ್ಲಿ ನೆರವೇರಿಸಲಾಗಿದೆ. ಈ ವೇಳೆತ್ರಿಪಾಠಿ ಅವರ ಸಹೋದರ ತಮ್ಮ ಪತ್ನಿಯೊಂದಿಗೆ ಪಾಲ್ಗೊಂಡಿದ್ದರು.
ಪಶುಪತಿನಾಥ ದೇವಾಲಯವು ಬಗಮತಿ ನದಿ ದಂಡೆಯ ಮೇಲೆ ನಿರ್ಮಾಣವಾಗಿದ್ದು, ನೇಪಾಳದಲ್ಲಿರುವ ಪ್ರಮುಖ ಹಿಂದೂ ದೇವಾಲಗಳಲ್ಲಿ ಒಂದಾಗಿದೆ.