ಬೀಜಿಂಗ್: ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ನಿರ್ಬಂಧ ಹೇರಿದ್ದಕ್ಕಾಗಿ ಅಮೆರಿಕ ಮತ್ತು ಯುರೋಪ್ ವಿರುದ್ಧ ವಾಗ್ದಾಳಿ ನಡೆಸಿರುವ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್,ಉದ್ದೇಶಪೂರ್ವಕ ನಿರ್ಬಂಧ ಹೇರುವ ಕಾರ್ಯ ವಿಶ್ವದಾದ್ಯಂತ ಜನರಿಗೆ ಹಾನಿ ಮಾಡುತ್ತದೆ ಎಂದು ಹೇಳಿದರು.
ಪ್ರಾಬಲ್ಯ, ಗುಂಪು ರಾಜಕೀಯ ಮತ್ತು ಬಣಗಳ ಘರ್ಷಣೆಗಳು ಶಾಂತಿ ಅಥವಾ ಸ್ಥಿರತೆ ತರುವುದಿಲ್ಲ, ಬದಲಿಗೆ ಯುದ್ಧ ಮತ್ತು ಸಂಘರ್ಷ ತರುತ್ತವೆ ಎಂಬುದನ್ನು ಇತಿಹಾಸ ತೋರಿಸಿದೆ ಎಂದು ಬ್ರಿಕ್ಸ್ ವ್ಯಾಪಾರ ವೇದಿಕೆ ಉದ್ಘಾಟನಾ ಸಮಾರಂಭದ ಮುಖ್ಯ ಭಾಷಣದಲ್ಲಿ ಜಿನ್ಪಿಂಗ್ ತಿಳಿಸಿದರು.
ಉಕ್ರೇನ್ ಬಿಕ್ಕಟ್ಟು ಮತ್ತೊಮ್ಮೆ ಮಾನವೀಯತೆಗೆ ಎಚ್ಚರಿಕೆ ನೀಡಿದೆ. ದೇಶಗಳು ತಮ್ಮ ಭದ್ರತೆ ಕುರಿತು ಕುರುಡು ನಂಬಿಕೆ ಇರಿಸಿದರೆ, ಇತರರ ವೆಚ್ಚದಲ್ಲಿ ತಮ್ಮದೇ ಸುರಕ್ಷತೆ ಹುಡುಕಿದರೆ ಖಂಡಿತವಾಗಿಯೂ ಭದ್ರತಾ ಸಂಕಷ್ಟಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಜೀ ಉಲ್ಲೇಖಿಸಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಧ್ಯಕ್ಷ ಜಿ ಅವರು ಆಯೋಜಿಸಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಜಿಲ್, ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಭಾಗವಹಿಸುವ ನಿರೀಕ್ಷೆಯಿದೆ.