ವಾಷಿಂಗ್ಟನ್: ‘ಅಮೆರಿಕ, ಭಾರತ ಸೇರಿದಂತೆ ವಿಶ್ವದ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ’ ಎಂದು ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದರು.
‘ಅಂತರರಾಷ್ಟ್ರೀಯ ಆತ್ಮಸಾಕ್ಷಿ ದಿನ’ದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ.6ರಂದು ಕ್ಯಾಪಿಟಲ್ ಮೇಲೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ ಅವರು, ‘ಪ್ರಜಾತಾಂತ್ರಿಕ ತಳಹದಿ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಹಲವಾರು ಸಂಸ್ಥೆಗಳಿಗೆ ಅಪಾಯ ಬಂದೊದಗಿದೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ’ ಎಂದರು.
‘ಜಾತ್ಯತೀತ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವದ ಸ್ಥಾನ ಇದೆ. ಈ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ಜನಾಂಗ, ಧರ್ಮಗಳ ಹಾಗೂ ವಿವಿಧ ಹಿನ್ನೆಲೆಯ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಲು, ಶಾಂತಿಯುತ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಖಾತರಿಪಡಿಸಬೇಕು’ ಎಂದರು.
ಮಾರ್ಚ್ 16ರಂದು ಅಟ್ಲಾಂಟಾದಲ್ಲಿ ಏಷಿಯನ್ –ಅಮೆರಿಕನ್ನರ ಮೇಲೆ ನಡೆದ ಸಾಮೂಹಿಕ ದಾಳಿ ಘಟನೆಯು, ಜನರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಯ ಅಗತ್ಯತೆಯನ್ನು ಸಾರಿ ಹೇಳುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.