ನವದೆಹಲಿ: ಈಜಿಪ್ಟ್ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯು (ಸಿಒಪಿ27)ಹವಾಮಾನ ಬದಲಾವಣೆಯ ಪರಿಣಾಮದಿಂದ ಉಂಟಾಗುವ ನಷ್ಟ ಮತ್ತು ಹಾನಿ ಭರಿಸಲು ಪರಿಹಾರ ನಿಧಿ ಸ್ಥಾಪಿಸಲು ನಿರ್ಧರಿಸಿದೆ. ಇದು, ಭಾರತ ಸೇರಿ ಹಲವು ರಾಷ್ಟ್ರಗಳ ದೀರ್ಘ ಕಾಲದ ಬೇಡಿಕೆಯಾಗಿತ್ತು.
ಆದರೆ, ಎಲ್ಲ ರೀತಿಯ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ತಗ್ಗಿಸಬೇಕೆಂಬ ಭಾರತದ ಕರೆಗೆ ಯುರೋಪ್ ಒಕ್ಕೂಟ, ಅಮೆರಿಕ ಸೇರಿದಂತೆ ವಿಶ್ವದ ಬಹುದೇಕ ದೇಶಗಳು ಓಗೊಟ್ಟರೂ, ಈ ಎಲ್ಲ ರಾಷ್ಟ್ರಗಳು ನಿರ್ಣಾಯಕ ಒಪ್ಪಂದಕ್ಕೆ ಬರುವಂತೆ ಮಾಡುವಲ್ಲಿ ವಿಫಲವಾಗಿದೆ.
197 ಸದಸ್ಯ ರಾಷ್ಟ್ರಗಳು ಒಪ್ಪಿದ ‘ಪರಿಹಾರ ನಿಧಿ ಸ್ಥಾಪನೆ ಖಾತ್ರಿಪಡಿಸುವ ಸಿಒಪಿ 27ರ ಒಪ್ಪಂದವು ಚಾರಿತ್ರಿಕವಾದುದು. ಇದಕ್ಕಾಗಿ ಇಡೀ ಜಗತ್ತು ತುಂಬಾ ಸಮಯದಿಂದ ಕಾಯುತ್ತಿದೆ’ ಎಂದು ಭಾರತ ಬಣ್ಣಿಸಿದೆ.
ಕಳೆದ ವರ್ಷ ಸ್ಕಾಟ್ಲೆಂಡ್ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿನ ಒಪ್ಪಂದಕ್ಕೆ ಹೋಲಿಸಿದರೆ ಈ ಬಾರಿ ಹವಾಮಾನ ಬದಲಾವಣೆ ಕುರಿತಇತರ ನಿರ್ಣಾಯಕ ವಿಷಯಗಳ ಫಲಿತಾಂಶವು ತುಸು ಪ್ರಗತಿ ಆಗಿರುವುದನ್ನೂ ಪ್ರತಿಬಿಂಬಿಸುತ್ತದೆ.
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್,ಕೃಷಿ ಮತ್ತು ಆಹಾರ ಭದ್ರತೆಯಲ್ಲಿ ಹವಾಮಾನ ಬದಲಾ ವಣೆ ಕುರಿತ ಯೋಜನೆಗಳ ಜಾರಿಗೊಳಿಸುವಾಗ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಹೊಣೆಯನ್ನು ಸಣ್ಣ ರೈತರಿಗೆ ವರ್ಗಾಯಿಸಬಾರದು ಎಂದರು.
ಸಿಒಪಿ 27 ಶುಕ್ರವಾರ ಸಮಾಪನವಾಗಬೇಕಿತ್ತು. ಆದರೆ, ಮಾಲಿನ್ಯ ತಗ್ಗಿಸುವಿಕೆ, ನಷ್ಟ ಮತ್ತು ಹಾನಿ ಪರಿಹಾರ ನಿಧಿ ಸ್ಥಾಪನೆ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬರಲು ದೀರ್ಘ ಸಮಯ ತೆಗೆದುಕೊಂಡಿದ್ದರಿಂದ ಶೃಂಗಸಭೆಯು ಭಾನುವಾರದವರೆಗೂ ನಡೆಯಿತು.