ಕೈರೊ, ಈಜಿಪ್ಟ್ (ಎಪಿ): ಸುಡಾನ್ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ನಡೆಯುವ ಎಲ್ಲಾ ಸಾಧ್ಯತೆಗಳು ಕಂಡುಬಂದಿದ್ದು, ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸಿಲ್ಲ ಎಂಬ ಕಾರಣಕ್ಕೆ ಹಂಗಾಮಿ ಪ್ರಧಾನಿ ಅಬ್ದುಲ್ಲಾ ಹಮ್ಡೋಮ್ ಅವರನ್ನೇ ಬಂಧಿಸಲಾಗಿದೆ.
‘ಕ್ಷಿಪ್ರಕ್ರಾಂತಿಗೆ ಬೆಂಬಲ ನೀಡುವುದಿಲ್ಲ ಎಂದು ಪ್ರಧಾನಿ ಹೇಳಿದರು. ಹೀಗಾಗಿ ಸೇನಾಪಡೆ ಪ್ರಧಾನಿ ಅವರನ್ನು ಬಂಧಿಸಿ, ನಿಗೂಢ ಸ್ಥಳಕ್ಕೆ ಕರೆದೊಯ್ದಿದೆ’ ಎಂದು ದೇಶದ ವಾರ್ತಾ ಸಚಿವಾಲಯ ತಿಳಿಸಿದೆ.
ಇದಕ್ಕೆ ಮೊದಲಾಗಿ ಸೇನಾಪಡೆಗಳು ಸೋಮವಾರ ಕನಿಷ್ಠ ಐದು ಮಂದಿ ಸುಡಾನ್ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಸಚಿವರನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೇನಾ ದಂಗೆಯನ್ನು ಎದುರಿಸಲು ಜನರು ಬೀದಿಗಿಳಿಯುವಂತೆ ರಾಷ್ಟ್ರದ ಪ್ರಜಾಪ್ರಭುತ್ವ ಪರ ಗುಂಪು ಜನರಿಗೆ ಕರೆ ನೀಡಿದೆ.
ದಂಗೆಯಿಂದ ದೇಶದಲ್ಲಿ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ಸ್ಥಗಿತಗೊಂಡಿವೆ ಎಂದು ಸುಡಾನ್ ವೃತ್ತಿಪರರ ಸಂಘ ಹೇಳಿದೆ.
ದೇಶದಲ್ಲಿ ಬಹುಕಾಲ ನಿರಂಕುಶಾಧಿಕಾರಿಯಾಗಿದ್ದ ಒಮರ್ ಅಲ್–ಬಶೀರ್ ಅವರನ್ನು ಸಾಮೂಹಿಕ ಪ್ರತಿಭಟನೆಗಳಿಂದ ಕೆಳಗಿಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲಾಗಿತ್ತು.
ಸುಡಾನ್ ನಾಗರಿಕರು ಮತ್ತು ಸೇನಾ ಪಡೆಗಳ ನಡುವೆ ಉದ್ವಿಗ್ನ ಸ್ಥಿತಿ ತೀವ್ರಗೊಂಡ ಬಳಿಕ ಸೋಮವಾರ ಈ ಬಂಧನ ನಡೆದಿದೆ. ಸೆಪ್ಟೆಂಬರ್ನಲ್ಲಿ ಸೇನಾ ದಂಗೆಯು ವಿಫಲವಾಗಿತ್ತು.