ಕೊಲಂಬೊ: ಶ್ರೀಲಂಕಾ ಸರ್ಕಾರವು ಕೋವಿಡ್ ಸೋಂಕಿನ ಪ್ರಸರಣವನ್ನು ನಿಯಂತ್ರಿಸಲು ರಾಜ್ಯದಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ. ಆದರೂ ನಿಯಮ ಉಲ್ಲಂಘಿಸಿ ಧಾರ್ಮಿಕ ಉತ್ಸವ ನಡೆಸಿದ ಆರೋಪದಡಿ ಹಿಂದೂ ದೇವಾಲಯ ಅಧಿಕಾರಿಗಳನ್ನು ಬಂಧಿಸಲಾಗಿದೆ.
‘ಜಫೀನಾದಲ್ಲಿರುವ ಶ್ರೀ ಕಾಮಾಕ್ಷಿ ಅಮ್ಮನ್ ಕೋವಿಲ್ನಲ್ಲಿ ಉತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಈ ವೇಳೆ ಯಾರೊಬ್ಬರೂ ಮುಖಗವುಸು ಧರಿಸಿರಲಿಲ್ಲ. ಜತೆಗೆ ಸಾಮಾಜಿಕ ಅಂತರವನ್ನು ಕೂಡ ಪಾಲಿಸಿರಲಿಲ್ಲ’ ಎಂದು ಕೊಲಂಬೊ ಗೆಜೆಟ್ ಪತ್ರಿಕೆ ವರದಿ ಮಾಡಿದೆ.
‘ಈ ಹಿನ್ನೆಲೆಯಲ್ಲಿ ದೇವಾಲಯದ ಟ್ರಸ್ಟಿಗಳ ಮಂಡಳಿಯ ಕಾರ್ಯದರ್ಶಿ ಮತ್ತು ಅಧ್ಯಕ್ಷರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು. ಶ್ರೀಲಂಕಾ ಸರ್ಕಾರವು ಸಾರ್ವಜನಿಕ ಸಭೆ, ಪಾರ್ಟಿಗಳನ್ನುಇದೇ 31ರ ತನಕ ನಿರ್ಬಂಧಿಸಿದೆ.
ಹೊಸ ಮಾರ್ಗಸೂಚಿಗಳನುಸಾರ ಕ್ಯಾಸಿನೋ, ನೈಟ್ ಕ್ಲಬ್, ಬೀಚ್ ಪಾರ್ಟಿಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಕಡಿಮೆ ಸಿಬ್ಬಂದಿಯೊಂದಿಗೆ ಅಥವಾ ವರ್ಕ್ ಫ್ರಾಮ್ ಹೋಂ ಮೂಲಕ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.