ನವದೆಹಲಿ: ಜಿ20 ಆತಿಥ್ಯ ವಹಿಸಿರುವ ಭಾರತವು 'ಶಾಂತಿ ಸೂತ್ರ'ದ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.
ಝೆಲೆನ್ಸ್ಕಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಈ ಬಗ್ಗೆ ಟ್ವಿಟರ್ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
'ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಜಿ20 ಅಧ್ಯಕ್ಷ ಸ್ಥಾನ ಪಡೆದಿದ್ದಕ್ಕಾಗಿ ಅಭಿನಂದಿಸಿದ್ದೇನೆ. ಶಾಂತಿ ಸೂತ್ರವನ್ನು ನಾನು ಇದೇ (ಜಿ20) ವೇದಿಕೆಯಲ್ಲಿಯೇ ಪ್ರಸ್ತಾಪ ಮಾಡಿದ್ದೆ. ಈಗ ಅದರ ಅನುಷ್ಠಾನಕ್ಕಾಗಿ ಭಾರತದ ಕ್ರಮವನ್ನು ನಿರೀಕ್ಷಿಸುತ್ತಿದ್ದೇನೆ. ವಿಶ್ವಸಂಸ್ಥೆಯಲ್ಲಿ ನೀಡಿದ ಬೆಂಬಲಕ್ಕಾಗಿ ನಾನು ಇದೇ ವೇಳೆ ಧನ್ಯವಾದ ಹೇಳಿದ್ದೇನೆ’ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ಕಳೆದ ತಿಂಗಳು ನಡೆದ ಜಿ20 ಶೃಂಗಸಭೆಯಲ್ಲಿ ಝೆಲೆನ್ಸ್ಕಿ ಅವರು 10 ಅಂಶಗಳ ಶಾಂತಿ ಸೂತ್ರ ಪಸ್ತಾಪಿಸಿದ್ದರು. ಇದರಲ್ಲಿ, ವಿಕಿರಣ ಮತ್ತು ಪರಮಾಣು ಭದ್ರತೆ, ಆಹಾರ ಭದ್ರತೆ, ಯುದ್ಧಪರಾಧಕ್ಕೆ ಶಿಕ್ಷೆ, ಉಕ್ರೇನ್ನಿಂದ ರಷ್ಯಾದ ಸೇನೆಯನ್ನು ಹಿಂದಕ್ಕೆ ಪಡೆಯುವ ಅಂಶಗಳು ಇದ್ದವು.