ಇಸ್ಲಾಮಾಬಾದ್: ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅಮೆರಿಕದ ಗುಲಾಮರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಆದರೆ ಭಾರತವು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಿ ಬೆಲೆ ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.
ಇದು ಭಾರತ ಸ್ವತಂತ್ರವಾಗಿದ್ದು, ನಾವು ಪಾಕಿಸ್ತಾನದವರು ಗುಲಾಮರು ಎಂದು ತೋರಿಸಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರೂ ಆಗಿರುವ ಇಮ್ರಾನ್ ಖಾನ್, ಚಾರ್ಸದ್ಧಾದಲ್ಲಿ ನಡೆದ ಕಾರ್ಮಿಕರ ಸಮಾವೇಶದಲ್ಲಿ ಹೇಳಿದರು.
ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿರುವ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೊಗಳಿದರು. ಪಾಕಿಸ್ತಾನದ ತ್ವರಿತ ಪ್ರಗತಿಗೂ ಸ್ವತಂತ್ರ ವಿದೇಶಾಂಗ ನೀತಿ ಅನಿವಾರ್ಯವಾಗಿದೆ ಎಂದುಪ್ರತಿಪಾದಿಸಿದರು.
'ಶೇ 30ರಷ್ಟು ರಿಯಾಯಿತಿ ದರದಲ್ಲಿ ತೈಲ ಖರೀದಿಸಲು ನಮ್ಮ ಸರ್ಕಾರವು ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಪಿಯೂರಿಮೂಲಕ ನಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು' ಎಂದು ಆರೋಪಿಸಿದರು.
ಶಾಂತಿಯುತ ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆಸಿದ ಪ್ರಧಾನಿ ಶಾಹಬಾಝ್ ಷರೀಫ್ ಅವರನ್ನು ರಾಷ್ಟ್ರ ಕ್ಷಮಿಸುವುದಿಲ್ಲ. ಅವರೆಲ್ಲರನ್ನು ಶೀಘ್ರದಲ್ಲೇ ಜೈಲಿಗೆ ಅಟ್ಟಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಇಸ್ಲಾಮಾಬಾದ್ಗೆ ಮತ್ತೊಂದು ಪ್ರತಿಭಟನಾ ಮೆರವಣಿಗೆಗೆ ಸಿದ್ಧರಾಗುವಂತೆ ಇಮ್ರಾನ್ ಖಾನ್ ಕರೆ ನೀಡಿದರು.