ದುಬೈ: ದುಬೈನಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ ₹ 24 ಕೋಟಿ ಬಹುಮಾನ ಬಂದಿದೆ. ಮೆಕಾನಿಕಲ್ ಎಂಜಿನಿಯರ್ ಶಿವಮೂರ್ತಿ ಕೃಷ್ಣಪ್ಪ ಅವರೇ ಈ ಅದೃಷ್ಟಶಾಲಿ.
‘ಇವರು, ಕಳೆದ 15 ವರ್ಷಗಳಿಂದ ದುಬೈನಲ್ಲಿ ವಾಸವಾಗಿದ್ದಾರೆ. ಬಹುಮಾನ ವಿಜೇತ 202511 ಸಂಖ್ಯೆಯ ಟಿಕೆಟ್ ಅನ್ನು ಅವರು ಫೆಬ್ರುವರಿ 17ರಂದು ಖರೀದಿಸಿದ್ದರು’ ಎಂದು ಗಲ್ಫ್ ನ್ಯೂಸ್ ವರದಿ ತಿಳಿಸಿದೆ.
ಮನೆಯಲ್ಲಿ ಕುಳಿತೇ ನೇರ ಪ್ರಸಾರದಲ್ಲಿ ಲಕ್ಕಿ ಡ್ರಾ ವೀಕ್ಷಿಸಿದ ಶಿವಮೂರ್ತಿ ಅವರು ಫಲಿತಾಂಶ ಕಂಡು ಉತ್ಸುಕರಾಗಿದ್ದರು. ‘ಡ್ರಾ ನಡೆಸಿಕೊಟ್ಟ ರಿಚರ್ಡ್ ಅವರು ದೂರವಾಣಿ ಮೂಲಕ ವಿಷಯ ತಿಳಿಸಿದಾಗ, ನಾನು ನೇರ ಪ್ರಸಾರ ವೀಕ್ಷಿಸುತ್ತಿದ್ದೇನೆ. ನನಗೆ ನಂಬಲಾಗುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು ಎಂದು ವರದಿ ಉಲ್ಲೇಖಿಸಿದೆ.
ನನ್ನ ಕುಟುಂಬ ಸದಸ್ಯರಿಗಾಗಿ ಹುಟ್ಟೂರಿನಲ್ಲಿ ನಾನು ಮನೆ ನಿರ್ಮಿಸಲು ಬಯಸಿದ್ದೇನೆ. 10 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಹುಮಾನದಲ್ಲಿ ದೊಡ್ಡ ಮೊತ್ತವನ್ನು ಅವರ ಹೆಸರಿನಲ್ಲಿ ಠೇವಣಿ ಇರಿಸುತ್ತೇನೆ ಎಂದು ಹೇಳಿದರು.
ಶಿವಮೂರ್ತಿ ಅವರು ಕಳೆದ ಮೂರು ವರ್ಷಗಳಿಂದ ದೊಡ್ಡ ಮೊತ್ತದ ಲಾಟರಿ ಖರೀದಿಸುತ್ತಲೇ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.