ನವದೆಹಲಿ: ಇಂಡೋನೇಷ್ಯಾದಲ್ಲಿ ಕಣ್ಮರೆಯಾಗಿರುವ 53 ನಾವಿಕರಿದ್ದ ಜಲಾಂತರ್ಗಾಮಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ನೆರವಾಗಲು ಭಾರತವು ಆಳ ಸಮುದ್ರ ಸಂರಕ್ಷಣಾ ಹಡಗೊಂದನ್ನು ಕಳುಹಿಸಿಕೊಟ್ಟಿದೆ.
‘ನೀರಿನೊಳಗೆ ಮುಳುಗಿರುವವರನ್ನು ರಕ್ಷಿಸುವ ಹಡಗು (ಡಿಎಸ್ಆರ್ವಿ) ವಿಶಾಖಪಟ್ಟಣದಿಂದ ತೆರಳಿದೆ’ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೀಸೆಲ್ ವಿದ್ಯುತ್ ಚಾಲಿತ ಜರ್ಮನಿಯಿಂದ ತಯಾರಾದ ಕೆಆರ್ಐ ನಂಗಲಾ–402 ಜಲಾಂತರ್ಗಾಮಿ ಬಾಲಿ ಜಲಸಂಧಿಯಲ್ಲಿ ಸೇನಾ ಸಮರಾಭ್ಯಾಸದ ವೇಳೆ ನಾಪತ್ತೆಯಾಗಿದೆ. ಸಿಂಗಪುರ, ಮಲೇಷ್ಯಾಗಳೂ ಸಹ ಪರಿಹಾರ ನೌಕೆಗಳನ್ನು ಕಳುಹಿಸಿಕೊಟ್ಟಿವೆ.
700 ಮೀಟರ್ ಆಳದಲ್ಲಿ ಜಲಾಂತರ್ಗಾಮಿ? (ಜಕಾರ್ತ ವರದಿ): ಜಲಾಂತರ್ಗಾಮಿ 600ರಿಂದ 700 ಮೀಟರ್ ಆಳದಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಇಂಡೋನೇಷ್ಯಾ ನೌಕಾಪಡೆ ಹೇಳಿದೆ.
ಸಾಮಾನ್ಯವಾಗಿ ಜಲಾಂತರ್ಗಾಮಿಗಳು ಗರಿಷ್ಠ 200 ಮೀಟರ್ ಆಳದ ಸಮುದ್ರದಲ್ಲಿ ಸಂಚರಿಸಲು ಅವಕಾಶ ಇದೆ. ಅದಕ್ಕಿಂತ ತಳಭಾಗಕ್ಕೆ ಹೋದರೆ ಅದರ ಕವಚದ ಮೇಲೆ ಒತ್ತಡ ಬೀಳುತ್ತದೆ. ಈ ನತದೃಷ್ಣ ಜಲಾಂತರ್ಗಾಮಿ ನಿಗದಿತ ಆಳಕ್ಕಿಂತ ಕೆಳಗೆ ಇಳಿದುದರಿಂದ ಅದು ಮುಳುಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.