ವಿಶ್ವಸಂಸ್ಥೆ: ಇಸ್ಲಾಮಿಕ್ ಸ್ಟೇಟ್ (ಐಎಸ್) ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದ ಭಯೋತ್ಪಾದಕ ಸಂಘಟನೆಯಲ್ಲ. ಅದು ವಿಶ್ವದಾದ್ಯಂತ ವಿವಿಧ ಅಂಗ ಸಂಸ್ಥೆ, ಗುಂಪುಗಳೊಂದಿಗೆ ಜಾಗತಿಕವಾಗಿ ವ್ಯಾಪಿಸಿಕೊಂಡಿದೆ, ಇದರ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.
ಭಯೋತ್ಪಾದನಾ ಕೃತ್ಯಗಳಿಗೆ ಸಹಕರಿಸುವ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜಾಗತಿಕ ಹೋರಾಟದ ವಿಶ್ವಾಸಾರ್ಹತೆಯನ್ನು ಬಲಪಡಿಸಬಹುದು ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಶಾಶ್ವತ ಪ್ರತಿನಿಧಿ ಮತ್ತು ರಾಜಕೀಯ ಸಂಯೋಜಕ ಆರ್. ರವೀಂದ್ರ ಪ್ರತಿಪಾದಿಸಿದ್ದಾರೆ.
‘ಇರಾಕ್ನಲ್ಲಿನ ಇಸ್ಲಾಮಿಕ್ ಸ್ಟೇಟ್ ಮತ್ತು ಲೆವಂಟ್ (ಐಎಸ್ಐಎಲ್) ಇರಾಕ್ ಜನರ ವಿರುದ್ಧ ಅಮಾನವೀಯವಾಗಿ ಕೃತ್ಯಗಳನ್ನು ನಡೆಸಿವೆ. ಐಎಸ್ಐಎಲ್ ಭೀಕರ ಅಪರಾಧಗಳ ಬಲಿಪಶುಗಳಲ್ಲಿ ಭಾರತೀಯ 39 ಪ್ರಜೆಗಳೂ ಸೇರಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಐಎಸ್ಐಎಲ್ ಮಾಡಿದ ಅಪರಾಧಗಳಿಗೆ ಉತ್ತರದಾಯಿಯನ್ನು ಗುರುತಿಸಲು ಭದ್ರತಾ ಮಂಡಳಿ ರಚಿಸಿರುವ ತನಿಖಾ ತಂಡದ ಎದುರು ಅವರು ಮಾಹಿತಿ ನೀಡಿದರು.
ಐಎಸ್ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಎಂದೂ ಕರೆಯಲ್ಪಡುವ ಐಎಸ್ಐಎಲ್ ಹಿಂಸಾತ್ಮಕ ಸಿದ್ಧಾಂತವನ್ನು ಹೊಂದಿರುವ ಜಿಹಾದಿ ಗುಂಪಾಗಿದ್ದು, ಮುಸ್ಲಿಮರ ಮೇಲೆ ಧಾರ್ಮಿಕ ಅಧಿಕಾರವನ್ನು ಚಲಾಯಿಸಲು ಮುಂದಾಗುತ್ತಿದೆ ಎಂದು ದೂರಿದ್ದಾರೆ.
ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ನಿಯಂತ್ರಣದಲ್ಲಿರುವ ಭೂ ಪ್ರದೇಶದಾದ್ಯಂತ ಐಎಸ್ಐಎಲ್ ಜನಾಂಗೀಯ ಹತ್ಯೆ, ಹಿಂಸೆ, ಅತ್ಯಾಚಾರ, ಗುಲಾಮಗಿರಿ ಮತ್ತು ಅಪಹರಣವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ರವೀಂದ್ರ ಹೇಳಿದ್ದಾರೆ.
‘ಭಯೋತ್ಪಾದಕರು ನಡೆಸಿದ ಗಂಭೀರ ಮತ್ತು ಅಮಾನವೀಯ ಭಯೋತ್ಪಾದನಾ ಕೃತ್ಯಗಳಿಗೆ ಹೊಣೆಗಾರರು ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜತೆಗೆ ಭಯೋತ್ಪಾದನೆಯನ್ನು ಉತ್ತೇಜಿಸುವ, ಬೆಂಬಲಿಸುವ ಮತ್ತು ಹಣಕಾಸು ಪೂರೈಸುವ ದೇಶಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ ಭಯೋತ್ಪಾದನೆ ವಿರುದ್ಧದ ಸಾಮೂಹಿಕ ಹೋರಾಟದ ವಿಶ್ವಾಸಾರ್ಹತೆಯನ್ನು ಬಲಪಡಿಸಬಹುದು’ ಎಂದು ರವೀಂದ್ರ ಒತ್ತಿ ಹೇಳಿದ್ದಾರೆ.