ಕೊಲಂಬೊ, ಶ್ರೀಲಂಕಾ: ಹಠಾತ್ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಒಂದು ವಾರದ ಮಟ್ಟಿಗೆ ಸಂಸತ್ತನ್ನು ಅಮಾನತುಗೊಳಿಸಿ ಅನೌಪಚಾರಿಕ ಭೇಟಿಗಾಗಿ ಸಿಂಗಪುರಕ್ಕೆ ತೆರಳಿದ್ದಾರೆ.
ಗೋಟಬಯ ಅವರ ಈ ನಿರ್ಧಾರದ ಬಗ್ಗೆ ಸರ್ಕಾರ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶುಕ್ರವಾರ ಸಂಸತ್ತಿನ ಅಧಿವೇಶನ ಮುಕ್ತಾಯಗೊಂಡಿದೆ. ಮುಂದಿನ ಅಧಿವೇಶನ ಜನವರಿ 11 ರಿಂದನಡೆಯಬೇಕಿತ್ತು. ಆದರೆ ಈಗ ಜನವರಿ 18 ರಿಂದಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.
ಅಧ್ಯಕ್ಷ ರಾಜಪಕ್ಸೆ ಅವರು ಡಿಸೆಂಬರ್ 12ರಂದು ಗೆಜೆಟ್ ಅಧಿಸೂಚನೆಯೊಂದರ ಮೂಲಕ ಸಂಸತ್ತಿನ ಅಧಿವೇಶನವನ್ನು ಅಮಾನತುಗೊಳಿಸಿದರು.
‘2021ರ ಡಿಸೆಂಬರ್ 12ರ ಮಧ್ಯರಾತ್ರಿಯಿಂದ ಸಂಸತ್ತಿನ ಕಲಾಪವನ್ನು ಮೊಟಕುಗೊಳಿಸಿದ್ದು 2022ರ ಜನವರಿ 18ರ ಬೆಳಿಗ್ಗೆ 10 ಗಂಟೆಗೆ ಮುಂದಿನ ಅಧಿವೇಶನ ಕರೆಯಲಾಗುವುದು’ ಎಂದು ಗೆಜೆಟ್ನ ಅಧಿಸೂಚನೆ ಹೇಳಿದೆ.
ಗೋಟಬಯ ಅವರ ಭೇಟಿ ಖಾಸಗಿಯಾಗಿದ್ದು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದೆ ಎಂದು ಅಧ್ಯಕ್ಷರ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.