ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ಸತೀಶ್ ಧುಪೆಲಿಯಾ ಅವರು ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೂರು ದಿನಗಳ ನಂತರ ಕೋವಿಡ್-19ನಿಂದಾಗಿ ಭಾನುವಾರ ಜೋಹಾನ್ಸ್ಬರ್ಗ್ನಲ್ಲಿ ಮೃತಪಟ್ಟಿರುವುದಾಗಿ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಒಂದು ತಿಂಗಳ ಕಾಲ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್-19 ಸೋಂಕು ತಗುಲಿದ್ದರಿಂದಾಗಿ ಮೃತಪಟ್ಟಿರುವುದಾಗಿ ಧುಪೆಲಿಯಾ ಅವರ ಸಹೋದರಿ ಉಮಾ ಧುಪೆಲಿಯಾ-ಮೆಸ್ಟ್ರಿ ದೃಢಪಡಿಸಿದರು.
'ನ್ಯುಮೋನಿಯಾದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಸಹೋದರ ಒಂದು ತಿಂಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಆ ವೇಳೆ ಕೊರೊನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಅವರಿಗೆ ಇಂದು (ಭಾನುವಾರ) ಸಂಜೆ ತೀವ್ರ ಹೃದಯಾಘಾತವಾಗಿತ್ತು' ಎಂದು ಎಂಎಸ್ ಉಮಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಎಂ.ಎಸ್. ಉಮಾ ಅವರ ಜೊತೆಗೆ ಧುಪೆಲಿಯಾ ಅವರು ಜೋಹಾನ್ಸ್ಬರ್ಗ್ನಲ್ಲಿ ವಾಸಿಸುತ್ತಿದ್ದ ಕೀರ್ತಿ ಮೆನನ್ ಎಂಬ ಇನ್ನೊಬ್ಬ ಸಹೋದರಿಯನ್ನು ಅಗಲಿದ್ದಾರೆ. ಅವರು ಅಲ್ಲಿ ಗಾಂಧಿ ಸ್ಮರಣೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು.
ತಮ್ಮ ಬಹುಪಾಲು ಜೀವನವನ್ನು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೊಗ್ರಾಫರ್ ಮತ್ತು ಫೊಟೊಗ್ರಾಫರ್ ಆಗಿ ಕಳೆದ ಧುಪೆಲಿಯಾ, ಮಹಾತ್ಮ ಗಾಂಧಿ ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಡರ್ಬನ್ ಬಳಿಯ ಫೀನಿಕ್ಸ್ ಸೆಟಲ್ಮೆಂಟ್ನಲ್ಲಿ ಸ್ಥಾಪಿತವಾದ ಗಾಂಧಿ ಅಭಿವೃದ್ಧಿ ಟ್ರಸ್ಟ್ಗೆ ಸಹಾಯ ಮಾಡುವಲ್ಲಿ ಬಹಳ ಸಕ್ರಿಯರಾಗಿದ್ದರು. ಅಲ್ಲದೆಎಲ್ಲಾ ಸಮುದಾಯಗಳ ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಸಾಮಾಜಿಕ ಕಲ್ಯಾಣ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಸ್ನೇಹಿತರು ಮತ್ತು ಆತ್ಮೀಯರು ಮೃತರಿಗೆ ಗೌರವ ಸಲ್ಲಿಸಿದ್ದಾರೆ.
'ನಾನು ಆಘಾತಕ್ಕೊಳಗಾಗಿದ್ದೇನೆ. ಸತೀಶ್ ಓರ್ವ ಮಹಾನ್ ಮಾನವತಾವಾದಿ ಮತ್ತು ಕಾರ್ಯಕರ್ತರಾಗಿದ್ದರು. ಅವರು ನಿಂದನೆಗೊಳಗಾದ ಮಹಿಳೆಯರಿಗಾಗಿ ಇರುವ ಸಲಹಾ ಡೆಸ್ಕ್ನ ಉತ್ತಮ ಸ್ನೇಹಿತರಾಗಿದ್ದರು ಮತ್ತು ತಮಗೆ ಸಾಧ್ಯವಾಗುವ ಎಲ್ಲ ರೀತಿಯಲ್ಲೂ ಸಂಸ್ಥೆಗೆ ಸಹಾಯ ಮಾಡುತ್ತಿದ್ದರು' ಎಂದು ರಾಜಕೀಯ ವಿಶ್ಲೇಷಕ ಲುಬ್ನಾ ನಡ್ವಿ ಹೇಳಿದ್ದಾರೆ.
ಧುಪೆಲಿಯಾ ಅವರು 1860ರ ಹೆರಿಟೇಜ್ ಫೌಂಡೇಶನ್ ಮಂಡಳಿಯ ಸದಸ್ಯರೂ ಆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.