ಕೌಲಾಲಂಪುರ: ಮಲೇಷ್ಯಾದಲ್ಲಿ ತಲೆದೊರಿದ್ದ ರಾಜಕೀಯ ಅಸ್ಥಿರತೆಗೆ ದೊರೆ ಸುಲ್ತಾನ್ ಅಬ್ದುಲ್ಲಾ ತಾರ್ಕಿಕ ಅಂತ್ಯ ಕಲ್ಪಿಸಿದ್ದಾರೆ. ಯಾವುದೇ ಪಕ್ಷಗಳಿಗೆ ಬಹುಮತ ಬರದ ಹಿನ್ನೆಲೆ ಸರ್ವ ಸಪಕ್ಷಗಳು ಸೇರಿ ’ಐಕ್ಯತಾ ಸರ್ಕಾರ‘ ರಚಿಸಿ ಎಂದು ಆದೇಶಿಸಿದ್ದಾರೆ.
ವಿಪಕ್ಷ ನಾಯಕ ಅನ್ವರ್ ಇಬ್ರಾಹಿಂ ಅವರ ಪಕ್ಷ ಅತೀ ಹೆಚ್ಚು ಸ್ಥಾನ ಗಳಿಸಿದ್ದರಿಂದ ಇಬ್ರಾಹಿಂ ಅವರನ್ನೇ 10ನೇ ಪ್ರಧಾನಿಯಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.
‘ಮಲೈ ರಾಜಮನೆತನದ ಅಭಿಪ್ರಾಯಗಳನ್ನು ಪಡೆದ ಬಳಿಕ, ಅನ್ವರ್ ಇಬ್ರಾಹಿಂ ಅವರನ್ನು 10ನೇ ಪ್ರಧಾನಿಯಾಗಿ ನೇಮಿಸಿ ದೊರೆ ಆದೇಶಿಸಿದ್ದಾರೆ‘ ಎಂದು ಮಲೇಷ್ಯಾದ ಅರಮನೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟಕ್ಕೆ ಸರಳ ಬಹುಮತ ಬಾರದ ಕಾರಣ, ಪ್ರಧಾನಿಯನ್ನು ಆಯ್ಕೆ ಮಾಡುವ ಹೊಣೆ ದೊರೆ, ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾ ಅವರ ಮೇಲಿತ್ತು.
ಅವರು ವಿಪಕ್ಷ ನಾಯಕ ಅನ್ವರ್ ಇಬ್ರಾಹಿಂ ಅವರನ್ನು ಪ್ರಧಾನಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಅನ್ವರ್ ನೇತೃತ್ವದ ಮೈತ್ರಿಕೂಟ (ಪಕತನ್ ಹರಪನ್) 82 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಮಾಜಿ ಪ್ರಧಾನಿ ಮುಹ್ಯುದ್ದೀನ್ ಯಾಸೀನ್ ಅವರ ಮೈತ್ರಿಕೂಟ (ಪೆರಿಕತನ್ ನ್ಯಾಸಿನಲ್) 73 ಸೀಟುಗಳಲ್ಲಿ ಗೆಲುವು ಪಡೆದಿತ್ತು.
ಸರಳ ಬಹುಮತಕ್ಕೆ 112 ಸೀಟುಗಳು ಬೇಕಿದ್ದು, ಉಭಯ ಮೈತ್ರಿಕೂಟಗಳು ಬಹುಮತ ಪಡೆಯುವಲ್ಲಿ ವಿಫಲವಾಗಿದ್ದವು.
ಹೀಗಾಗಿ ಉಭಯ ಮೈತ್ರಿಕೂಟಗಳು ಒಟ್ಟಾಗಿ ಸೇರಿ ‘ಐಕ್ಯತಾ ಸರ್ಕಾರ‘ ನಡೆಸಿ ಎಂದು ದೊರೆ ಆದೇಶಿಸಿದ್ದಾರೆ.